TOP STORIES:

” ಮುಂಬೈ ಮಹಾನಗರಿಯ ಸಾಧಕಲೋಕದಲ್ಲಿ – ಸಚಿನ್ ಎಸ ಪೂಜಾರಿ ಭಿವಂಡಿ “


” ಮುಂಬೈ ಮಹಾನಗರಿಯ ಸಾಧಕಲೋಕದಲ್ಲಿ – ಸಚಿನ್ ಎಸ ಪೂಜಾರಿ ಭಿವಂಡಿ “

ಬಿಡುವಿಲ್ಲದೆ ಸಾಗುವ ಮನುಷ್ಯನ ಯಾಂತ್ರಿಕ ಜೀವನದಲ್ಲಿ ಕಲೆಯ ಸ್ಥಾನ ಮಹತ್ತರವಾದುದು. ಜೀವನವನ್ನು ಕೇವಲ ವ್ಯಾವಹಾರಿಕವಾಗಿ ನೋಡದೆ ಕಲಾತ್ಮಕವಾಗಿ ನೋಡಿದಾಗ ಮಾತ್ರ ಮನುಷ್ಯನ ಜೀವನ ಸಾರ್ಥಕ್ಯವನ್ನು ಹೊಂದುತ್ತದೆ. ಅಲ್ಲದೆ ” ಸಾಹಿತ್ಯ ಸಂಗೀತ ಕಲಾವಿಹೀನಃ ಸಾಕ್ಷಾತ್ ಪಶುಃ ಪುಚ್ಛ ವಿಷಾಣವಿಹೀನಃ “- ಇದರ ಅರ್ಥ, ” ಕಲಾಸಕ್ತಿ ಇಲ್ಲದ ಮನುಷ್ಯ ಪಶುವಿಗಿಂತಲೂ ಕಡೆ ” ಎಂಬ ಸುಭಾಶಿತದ ಮಾತು ಕೂಡ ಮನುಷ್ಯನ ಕಲಾಸಕ್ತಿಯ ಶ್ರೇಷ್ಠತೆಗೆ ಪುಷ್ಟಿ ನೀಡುವಂತಿದೆ. ಎಳವೆಯಿಂದಲೆ ತನ್ನಲ್ಲಿರುವ ನಟನಾ ಕಲೆಯನ್ನು ಪೋಷಿಸಿಕೊಂಡು ಬಂದು ಸಾಧನೆಯ ಪಥದಲ್ಲಿ ಮುಂದುವರೆಯುತ್ತಿರುವ ಮುಂಬೈ ಮಹಾನಗರಿಯ ಒಂದು ಪ್ರತಿಭೆ ಸಚಿನ್ ಎಸ್ ಪೂಜಾರಿ, ಭಿವಂಡಿ.

ಸಚಿನ್ ಪೂಜಾರಿ ಎಂದೆ ಹೆಸರುವಾಸಿಯಾಗಿರುವ ಇವರ ನಿಜವಾದ ಹೆಸರು ಕೇಶವ್ ಪೂಜಾರಿ. ಶೇಖರ್ ಪೂಜಾರಿ ಮತ್ತು ಯಮುನ ದಂಪತಿಗಳ ಮಗನಾಗಿ ನವೆಂಬರ್ 01, 1996ರಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ಜನಿಸಿದರು. ಜನಿಸಿದ್ದು ಮೂಡಬಿದ್ರೆಯಲ್ಲಾದರು ಬೆಳೆದದ್ದು ಮುಂಬೈಯಲ್ಲಿ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಡಾ. ಓಂಪ್ರಕಾಶ್ ಅಗರ್ವಾಲ್ ಹೈಸ್ಕೂಲ್ ನಲ್ಲಿ , ಪದವಿಪೂರ್ವ ಶಿಕ್ಷಣ ಮತ್ತು ಬಿ.ಕಾಂ ಪದವಿಯನ್ನು ಬಿ.ಎನ್.ಎನ್ ಕಾಲೇಜು ಭಿವಂಡಿಯಲ್ಲಿ ಪೂರೈಸಿದರು. ಪ್ರಸ್ತುತ ಟಿ.ಎಸ್.ಆರ್ ಧಾರಶಾ ಲಿ. ಕಂಪನಿಯಲ್ಲಿ ಸೀನಿಯರ್ ಅಸೋಸಿಯೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತನ್ನ ನಟನಾ ಮತ್ತು ನಿರೂಪಣಾ ಕೌಶಲ್ಯದಿಂದ ನಾಟಕ ರಂಗಭೂಮಿ ಮತ್ತು ಯಕ್ಷಗಾನ ಕಲಾವಿದರಾಗಿ ಮತ್ತು ನಿರೂಪಕರಾಗಿಯೂ ಪ್ರಖ್ಯಾತಿಯನ್ನು ಗಳಿಸಿದ್ದಾರೆ.

ಬಾಲ್ಯದ ದಿನಗಳಲ್ಲಿ ತಾಯಿಯು ಇವರನ್ನು ದೇವಾಲಯ ಮತ್ತು ಸಂಘಸಂಸ್ಥೆಗಳಿಗೆ ಜತೆಯಲ್ಲಿಯೆ ಕರೆದುಕೊಂಡು ಹೋಗುತ್ತಿದ್ದುದು ಇವರಿಗೆ ತುಳುನಾಡಿನ ಸಂಸ್ಕೃತಿಯ ಬಗ್ಗೆ ಪ್ರೀತಿ ಮತ್ತು ಅಭಿಮಾನ ಮೂಡಲು ಕಾರಣವಾಯಿತು. 7ನೇ ತರಗತಿಯಲ್ಲಿದ್ದಾಗ ಶಾಲೆಯಲ್ಲಿ ಮರಾಠಿ ಭಾಷಣ ಮಾಡುವಂತಹ ಒಂದು ಅವಕಾಶ ಸಿಕ್ಕಿತು ಮತ್ತು ಅದರಲ್ಲಿ ಪ್ರಶಸ್ತಿ ಸಹ ದೊರೆಯಿತು. ಇದುವೆ ಜೀವನದ ಕಲಾಪಯಣದ ಮೊದಲ ಹೆಜ್ಜೆಯಾಯಿತು. 2011ರಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವಾಗ ಇವರು ಭಿವಂಡಿಯಲ್ಲಿರುವ ಗುರುನಾರಾಯಣಸ್ವಾಮಿ ಮಂದಿರಕ್ಕೆ ( ಬಿಲ್ಲವರ ಎಸೋಸಿಯೇಶನ್ ಸ್ಥಳೀಯ ಕಚೇರಿ ಭಿವಂಡಿ ) ಹೋಗುವ ಅಭ್ಯಾಸವನ್ನು ಮಾಡಿಕೊಂಡರು. ಮಾತ್ರವಲ್ಲದೆ ಅಲ್ಲಿ ಭಜನೆ, ಸಾಮಾಜಿಕ,ಸಾಂಸ್ಕೃತಿಕ ಮತ್ತು ಪೂಜಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು.

2013ರಲ್ಲಿ ನಡೆದ ಭಿವಂಡಿ ಸ್ಥಳೀಯ ಕಚೇರಿಯ ವಾರ್ಷಿಕ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟಿ ಕೆಂಚನಕೆರೆ ಮತ್ತು ಸುನಿಲ್ ಪೂಜಾರಿ ಪೊಸ್ರಾಲು ಇವರ ನಿರ್ದೇಶನ, ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಾಗಿ ನಾಟಕಗಳಲ್ಲಿ ಅಭಿನಯಿಸುವುದಕ್ಕೆ ಆರಂಭಿಸಿದರು. ಮನೋಹರ್ ಶೆಟ್ಟಿ ನಂದಳಿಕೆ, ನಾಗರಾಜ್ ಗುರುಪುರ,ಅನಿಲ್ ಹೆಗ್ಡೆ, ವಿ. ಕೆ. ಸುವರ್ಣ ಮತ್ತು ಚಂದ್ರಕಾಂತ್ ಸಾಲ್ಯಾನ್ ಇವರುಗಳ ನಿರ್ದೇಶನದಲ್ಲಿ ‘ರಾಂಗ್ ನಂಬರ್’, ‘ದ್ರೌಪದಿ ವಸ್ತ್ರಾಪಹರಣ’,’ನಮ್ಮ ಜೋಕುಲು’, ‘ತಪ್ಪು ಮಲ್ಪೊಡ್ಚಿ’, ‘ಬಿನ್ನೆರ್’, ‘ಸತ್ಯ ಒರಿಪಾವ’, ‘ಮಾಯಕದ ಮಾಣಿ’, ‘ಸತ್ಯ ಹರಿಶ್ಚಂದ್ರ’, ‘ಗುರಿಕಾರೆ ಗುವೆಲ್ಡ್’, ‘ಕೊಪ್ಪರಿಗೆ’, ‘ಲಿಂಕ್ ಲಿಂಗಪ್ಪೆ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು. ಅದರಲ್ಲಿಯೂ ನಾಗರಾಜ್ ಗುರುಪುರ ಇವರ ರಚನೆಯ “ಬಿನ್ನೆರ್” ನಾಟಕದಲ್ಲಿ ನಿರ್ವಹಿಸಿದ ‘ಗೋವಿಂದ ಮಾಸ್ಟರ್’ ಪಾತ್ರ ಮತ್ತು ನಾರಾಯಣ ಶೆಟ್ಟಿ ನಂದಳಿಕೆ ಇವರ ರಚನೆಯ ” ಮಾಯಕದ ಮಾಣಿ ” ನಾಟಕದಲ್ಲಿ ನಿರ್ವಹಿಸಿದ ‘ಕಲ್ಜಿಗ’ ಪಾತ್ರ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಗಿದ್ದು , ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ. ಹಲವಾರು ಪ್ರೋತ್ಸಾಹಕ ಪಾತ್ರಗಳು ಮತ್ತು ಮುಖ್ಯಪಾತ್ರಗಳನ್ನು ಮಾಡುವುದರ ಮೂಲಕ ತಮ್ಮ ತಂಡ ಹಲವಾರು ಸ್ಪರ್ಧೆಗಳಲ್ಲಿ ಗೆಲ್ಲುವುದಕ್ಕೆ ಶ್ರಮವಹಿಸಿದ್ದಾರೆ. ಬೆಂಗಳೂರು ಮತ್ತು ಮುಂಬೈಯ ನಾನಾಕಡೆಗಳಲ್ಲಿ ಪ್ರದರ್ಶನ ನೀಡಿದ್ದಾರೆ.

ನಾಟಕಗಳಲ್ಲಿ ಸಚಿನ್ ರ ಅಭಿನಯ ಮತ್ತು ಹಾಸ್ಯಪ್ರಜ್ಞೆಯನ್ನು ಗಮನಿಸಿದ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಾರ್ಯದರ್ಶಿಗಳಾದ ಅಶೋಕ್ ಸಸಿಹಿತ್ಲು ಅವರು ಯಕ್ಷಗಾನದಲ್ಲಿ ವೇಷ ಮಾಡುವುದರ ಬಗ್ಗೆ ಸಚಿನ್ ರ ಅಭಿಪ್ರಾಯ ಕೇಳಿದರು. ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಆಸಕ್ತಿ ಮತ್ತು ಒಲವು ಹೊಂದಿದ್ದ ಸಚಿನ್ ರು ವೇಷ ಮಾಡುವುದಕ್ಕೆ ಒಪ್ಪಿಕೊಂಡರು. ಅಲ್ಲಿಂದ ಸಚಿನ್ ರ ಕಲಾಪಯಣದ ಮತ್ತೊಂದು ಮಜಲು ತೆರೆದುಕೊಂಡಿತು. ಸಾಮಾಜಿಕ ಮತ್ತು ಪೌರಾಣಿಕ ಪ್ರಸಂಗಗಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮುಂಬೈಯ ಹಲವಾರು ಕಡೆಗಳಲ್ಲಿ ಮತ್ತು ಗುಜರಾತಿನ ಸೂರತ್, ಬರೋಡ, ಅಹಮದಬಾದ್ ನಲ್ಲಿ ನೀಡಿದ್ದಾರೆ. ಇದುವರೆಗೆ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್, ಶ್ರೀ ಗೀತಾಂಬಿಕ ಯಕ್ಷಗಾನ ಮಂಡಳಿ ಅಸಲ್ಫ , ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸಾಕಿನಾಕ ಮತ್ತು ಇತರ ಮಂಡಳಿಗಳಲ್ಲಿ ಮಾಲಿನಿದೂತ, ಭಟ್ರು, ಪಾತ್ರಿ, ಕುಡುಕಕಾಳು, ಕೇಳುಪಂಡಿತ, ಅಣ್ಣಯ್ಯ ಬೆಲ್ಚಡ, ಮುದುಕಿ ಮೊದಲಾದ ಹಾಸ್ಯಪಾತ್ರಗಳನ್ನು ದೇವಬಲ, ಈಶ್ವರ, ಮಂತ್ರವಾದಿ, ನಂದಕೇಶ, ಬಲರಾಮ, ಮಾಣಿಕ್ಯಕುಮಾರ ಮುಂತಾದ ಪುಂಡುವೇಷಗಳನ್ನು ಮತ್ತು ಆದಿಮಾಯೆ, ಶಂಕರಿ ಪೂಂಜೆದಿ, ಲೀಲಾ, ಸರ್ಪರಾಜ, ಸೈಂಧವ ಮುಂತಾದ ಇತರವೇಷಗಳನ್ನು ನಿರ್ವಹಿಸಿದ್ದಾರೆ. “ಗುರುನಾರಾಯಣ ಯಕ್ಷಗಾನ ಮಂಡಳಿಯ ಎಲ್ಲಾ ಹಾಗು ಮುಂಬೈ ಹಿರಿಯ ಕಲಾವಿದರ ಮತ್ತು ಹಿಮ್ಮೇಳ ಕಲಾವಿದರ ಸಹಕಾರದಿಂದ ತಾನು ಯಕ್ಷಗಾನದಲ್ಲಿ ಬೆಳೆಯುವಂತಾಯಿತು” ಎನ್ನುತ್ತಾರೆ ಸಚಿನ್.

ತನ್ನ ಸೀನಿಯರ್ ಮತ್ತು ಮುಂಬೈಯ ಪ್ರಸಿದ್ಧ ನಿರೂಪಕರಾದ ಲತೇಶ್ ಪೂಜಾರಿ ಮತ್ತು ನಿತೇಶ್ ಪೂಜಾರಿ ಮಾರ್ನಾಡ್ ರೊಂದಿಗೆ ಬಿಲ್ಲವರ ಎಸೋಸಿಯೇಶನ್ ಮುಂಬೈ ಸ್ಥಳೀಯ ಕಚೇರಿ ಭಿವಂಡಿ, ವಿಕ್ರೋಲಿ, ಬೋರಿವಾಲಿ,ಅಂಧೇರಿ, ಚೆಂಬೂರ್, ತೋನ್ಸೆ ಗರಡಿ ಬಿರುವೆರ್ ಕುಡ್ಲ ಸಮಿತಿ ಮುಂಬೈ , ಶ್ರೀ ಶನಿಮಹಾತ್ಮ ಸೇವಾ ಸಮಿತಿ ಖಾರ್ ರೋಡ್ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನಿರೂಪಣೆಯನ್ನು ಮಾಡಿದ್ದಾರೆ. ನಿರೂಪಕರಾಗಿ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟದ್ದು ಇವರ ಸಾಧನೆಯ ಮುಕುಟಕ್ಕೆ ಪೋಣಿಸಲ್ಪಟ್ಟ ಮತ್ತೊಂದು ಗರಿಯೆಂದರೆ ಅತಿಶಯವಾಗಲಾರದು.

ಕಲಾಸ್ಪರ್ಶ ಪ್ರೊಡಕ್ಷನ್ಸ್ ನ *’ಮಟ್ಟೆಲ್’* ಎಂಬ ತುಳು ಕಿರುಚಿತ್ರದಲ್ಲಿ ಮುಖ್ಯಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಬಿಲ್ಲವರ ಎಸೋಸಿಯೇಶನ್ ಮುಂಬೈ ಸ್ಥಳೀಯ ಕಚೇರಿ ಭಿವಂಡಿ ಇದರ ಆಶ್ರಯದಲ್ಲಿ *’ಕಲ್ಚರಲ್ ಟೀಮ್ ಭೀವಂಡಿ’* ಎಂಬ ಹೆಸರಿನ ತಂಡವೊಂದನ್ನು ಮತ್ತು ಯುಟ್ಯೂಬ್ ಚಾನೆಲ್ ಅನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಯುವಪ್ರತಿಭೆಗಳ ಮತ್ತು ಬಾಲಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ನಿರ್ಮಿಸಿದುದು ಮಾತ್ರವಲ್ಲದೆ *” ತುಳುನಾಡ ವೈಭವ “* ಎಂಬ ಕಾರ್ಯಕ್ರಮವೊಂದನ್ನು ನಿರ್ದೇಶಿಸಿ ಅನೇಕ ತುಳುವರ ಮನಸೂರೆಗೈದದ್ದು ಸುಳ್ಳಲ್ಲ. “ತುಳುನಾಡ ವೈಭವ” ಎಂಬ ಸಚಿನ್ ರ ಪರಿಕಲ್ಪನೆಯ ಕಾರ್ಯಕ್ರಮದಲ್ಲಿ 50 ಮಂದಿ ಪ್ರತಿಭೆಗಳು ಮುಂಬೈಯ ಹಲವಾರು ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವುದು ನಿಜಕ್ಕೂ ಪ್ರಶಂಸನೀಯ. ಬಿಲ್ಲವರ ಎಸೋಸಿಯೇಶನ್ ಸ್ಥಳೀಯ ಕಚೇರಿ ಭಿವಂಡಿಯಲ್ಲಿ ನಿರಂತರ 10 ವರ್ಷಗಳಿಂದ ಸೇವೆ ಸಲ್ಲಿಸಿ ಪ್ರಸ್ತುತ 2 ವರ್ಷಗಳಿಂದ ಸಂಸ್ಥೆಯ ಪದಾಧಿಕಾರಿಯಾಗಿದ್ದಾರೆ. ಇಷ್ಟು ಅಲ್ಲದೆ ತುಳುವಿನಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿ ಶನಿ ಗ್ರಂಥ ಪಾರಾಯಣ ತಾಳಮದ್ದಳೆಯಲ್ಲಿ ಅರ್ಥಗಾರಿಕೆ, ಅವರ ಯೂಟ್ಯೂಬ್ ಚಾನಲ್ ನಲ್ಲಿ ಕೋಟಿಚೆನ್ನಯರ ಕಥಾ ಪ್ರಸಾರ, “ಕಥೆತ ಎಥೆ” ಎನ್ನುವ ಕವನ ಹಾಗೂ ಲಾಕ್ಡೌನ್ ಸಮಯದಲ್ಲಿ ಸಾಮಾಜಿಕ ಮಾಧ್ಯಮ ಮುಖಾಂತರ ಕಲ್ಚರಲ್ ಟೀಮ್ ಭೀವಂಡಿ ಯೂಟ್ಯೂಬ್ ಚಾನಲ್ ನಲ್ಲಿ ಅವರ ಪರಿಕಲ್ಪನೆಯಿಂದ ತಂಡದ ಸದಸ್ಯರ ಜೊತೆ ಹಲವಾರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡಾ ಮಾಡಿರುವ ಇವರು ಕಾರ್ಯಕ್ರಮದಲ್ಲಿ ಅದೆಷ್ಟೋ ಪ್ರತಿಭಾವಂತರಿಗೂ ಒಂದು ವೇದಿಕೆ ದೊರಕಿಸಿಕೊಟ್ಟಿದ್ದಾರೆ.

ಸಾಧನೆ ಎನ್ನುವುದು ಸಕ್ಕರೆಯಾದರೆ ಪ್ರಶಸ್ತಿ , ಗೌರವ, ಸನ್ಮಾನಗಳು ಅದನ್ನರಸಿ ಬರುವ ಇರುವೆಗಳು. ಸಚಿನ್ ರ ಇಷ್ಟೆಲ್ಲ ಸಾಧನೆಗೆ ಅನೇಕ ಪ್ರಶಸ್ತಿ , ಸನ್ಮಾನಗಳು ದೊರಕಿದೆ.

ಗುರುನಾರಾಯಣ ನಾಟಕೋತ್ಸವ 2016 ಮತ್ತು 2018ರಲ್ಲಿ ‘ಕ್ರಿಟಿಕ್ ಅವಾರ್ಡ್’ ಎಂಬ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂಬೈಯ ಸುಪ್ರಸಿದ್ಧ ಮಹಿಳಾ ಭಾಗವತರಾದ ಶ್ರೀಮತಿ ಜಯಲಕ್ಷ್ಮಿ ದೇವಾಡಿಗರ ‘ಭಾಗವತಿಕೆ – ದಶಮಾನೋತ್ಸವ’ ಕಾರ್ಯಕ್ರಮದಲ್ಲಿ *” ಯುವ ಉದಯೋನ್ಮುಖ ಪ್ರತಿಭೆ “* ಎಂದು ಗುರುತಿಸಿ ಸನ್ಮಾನಿಸಲಾಗಿದೆ. ಹೀಗೆ ಅನೇಕ ಕಡೆಗಳಲ್ಲಿ ಸನ್ಮಾನಕ್ಕೆ ಪಾತ್ರರಾಗಿದ್ದಾರೆ.

*”ಬ್ರಹ್ಮಶ್ರೀ ನಾರಾಯಣಗುರುಗಳ ಹಾಗು ಶ್ರೀ ವರಲದೇವಿ ಅಮ್ಮನವರ ಆಶೀರ್ವಾದ, ದೈವದೇವರುಗಳ ಅನುಗ್ರಹ ಮತ್ತು ತನ್ನ ಕುಟುಂಬ ( ತಂದೆ – ಶೇಖರ್ ಪೂಜಾರಿ, ತಾಯಿ – ಯಮುನ, ಸಹೋದರಿ – ಸ್ವಾತಿ ), ಹಿತೈಷಿಗಳ ಪ್ರೋತ್ಸಾಹದಿಂದ ಇಷ್ಟೆಲ್ಲಾ ಸಾಧಿಸುವಂತಾಯಿತು”* ಎನ್ನುತ್ತಾರೆ ಸಚಿನ್.

ಪರಿಶ್ರಮ, ಶ್ರದ್ಧೆ , ಆಸಕ್ತಿ ಮತ್ತು ಬದ್ಧತೆಯಿಂದ ಬೆಳೆಯುತ್ತಿರುವ ಈ ಪ್ರತಿಭೆಯ ಸಾಧನೆ ಇನ್ನಷ್ಟು ಎತ್ತರಕ್ಕೇರಲಿ. ಇನ್ನಷ್ಟು ಗೌರವ, ಪ್ರಶಸ್ತಿಗಳು ಇವರನ್ನು ಅರಸಿ ಬರಲಿ….

ಬರಹ :- ಧೀರಜ್ ಪೂಜಾರಿ


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »