TOP STORIES:

FOLLOW US

ರಾಜಕಾರಣಿಯಾದವನು ಯಾವಾಗಲೂ ಪ್ರಾಮಾಣಿಕನಾಗಿರಬೇಕು: ಬಿ ಜನಾರ್ದನ ಪೂಜಾರಿ


ಆಗಿನ್ನೂ ನನಗೆ 8-9 ವರ್ಷ ಪ್ರಾಯ. ಮಂಗಳೂರಿನ ಬೊಕ್ಕಪಟ್ಣದ ಮುಸ್ಲಿಮರ ಮನೆಯಲ್ಲಿ ಬಾಡಿಗೆ ಬಿಡಾರಲ್ಲಿದ್ದೆವು. ನನ್ನ ತಂದೆಯವರ ಕುಟುಂಬ ಬೋಳಂತೂರಿನ ಮರಕಡಬೈಲಿನಲ್ಲಿತ್ತು. ಬೊಕ್ಕಪಟ್ಣದಿಂದ ಬೋಳಂತೂರಿಗೆ ಸುಮಾರು 17 ಮೈಲು ಅಂತರ. ನಡೆದುಕೊಂಡೇ ಹೋಗುತ್ತಿದ್ದೆವು. ಹೀಗೆ ಒಂದು ದಿನ ನಾನು ಮತ್ತು ನನ್ನ ತಂದೆಯವರು ನಡೆದುಕೊಂಡು ಹೋಗುತ್ತಿದ್ದಾಗ ಪಾಣೆಮಂಗಳೂರು ದಾಟುತ್ತಿದ್ದಂತೆ ತಂದೆಯವರು ಹೊಟೇಲಿಗೆ ಕರೆದುಕೊಂಡು ಹೋದರು. ಇನ್ನೇನು ಒಳಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ಹೊಟೇಲಿನವರು ನಮ್ಮನ್ನು ತಡೆದರು. ಒಳಗೆ ಕಾಲಿಡಬಾರದು ಎಂದರು. ನಾವು ಹೊರಗಡೆ ನಿಂತೆವು. ತೆಂಗಿನ ಗೆರಟೆ (ಚಿಪ್ಪು)ಯಲ್ಲಿ ಚಹಾ ತಂದುಕೊಟ್ಟರು. ನನ್ನ ತಂದೆ ಅದನ್ನು ಸ್ವೀಕರಿಸಲಿಲ್ಲ.
ಮತ್ತೊಂದು ಘಟನೆ… ಹತ್ತೋ ಹನ್ನೆರಡೋ ವರ್ಷವಿದ್ದೀತು ನನಗೆ. ನನ್ನ ಅಣ್ಣ ಕನ್ನಡಿ ತಯಾರಿಸುವ ಕೆಲಸ ಮಾಡುತ್ತಿದ್ದ. ಅದನ್ನು ಶುದ್ಧ ನೀರಿನಲ್ಲಿ ಮಾಡಬೇಕು. ಮಂಗಳೂರಿನ ದೇವಾಲಯವೊಂದರಲ್ಲಿ ನೈಸರ್ಗಿಕವಾಗಿ ಒಸರುವ ಶುದ್ಧ ನೀರನ್ನು ತರಲು ಹೇಳಿ ನನ್ನ ಕೈಗೆ ನಾಲ್ಕಾಣೆ ಕೊಟ್ಟು ದೊಡ್ಡ ಬಾಟಲಿ ನೀಡಿ ಕಳುಹಿಸುತ್ತಿದ್ದ. ಪ್ರತಿಸಲ ಆ ದೇವಾಲಯಕ್ಕೆ ಹೋದಾಗ ಅಲ್ಲಿದ್ದ ಏಳೆಂಟು ಸಣ್ಣ ಸಣ್ಣ ಕೆರೆಗಳಲ್ಲಿ ಆಟವಾಡಿ, ಸ್ನಾನ ಮಾಡಿ, ದೇವಾಲಯದ ಒಳಗೆ ಹೋಗಿ ಪ್ರಾರ್ಥನೆ ಮಾಡಿ ಬಳಿಕ ನೀರು ಕೊಂಡೊಯ್ಯುತ್ತಿದ್ದೆ. ಒಂದು ದಿನ ದೇವಾಲಯದ ಒಳಗೆ ಹೋಗುವಾಗ ನಾನು ಬಿಲ್ಲವ ಜಾತಿಯವನು ಎನ್ನುವುದು ಅವರಿಗೆ ಗೊತ್ತಾಯಿತು. ನನ್ನ ಕುತ್ತಿಗೆಗೆ ಕೈ ಹಾಕಿ ಎಳೆದುಕೊಂಡು ಬಂದು ಹೊರದೂಡಿದರು. ಅತಿ ಸಣ್ಣ ವಯಸ್ಸಿನಲ್ಲಿ ನನ್ನ ಮನಸ್ಸಿನ ಮೇಲಾದ ಅಸ್ಪಶ್ಯತೆಯ ಗಾಯ ಮಾಸಲಿಲ್ಲ. ಅಲ್ಲಿಗೆ ಹೋಗುವುದನ್ನೇ ನಿಲ್ಲಿಸಿದೆ. ನಾನು ಮಂತ್ರಿಯಾದ ಮೇಲೆ ಅದೇ ದೇವಾಲಯಕ್ಕೆ ನನ್ನನ್ನು ಕರೆದರು. ಬ್ಯಾಂಡ್ ವಾಲಗದೊಂದಿಗೆ ಭಾರಿ ಜನ ಒಟ್ಟು ಸೇರಿ ಸ್ವಾಗತಿಸಿದರು.
ಹುಟ್ಟಿನಿಂದ ಯಾರೂ ಅಸ್ಪಶ್ಯರಲ್ಲ. ನಾವೆಲ್ಲರೂ ಪರಮಾತ್ಮನ ಮಕ್ಕಳು. ಹುಟ್ಟಿದ ಮಗುವಿಗೆ ಜಾತಿ, ಧರ್ಮ ಯಾವುದೂ ಇಲ್ಲ. ನನ್ನನ್ನು ಅವಹೇಳನ ಮಾಡಿದ್ದಕ್ಕೆ ನಾನು ಯಾರನ್ನೂ ದೂರಲಾರೆ. ನಾನು ಶ್ರೀಮಂತನಾಗಿ ಹುಟ್ಟಿದ್ದಿದ್ದರೆ ಇದೆಲ್ಲ ನಡೆಯುತ್ತಿರಲಿಲ್ಲ. ಬಡತನವೇ ಇದಕ್ಕೆಲ್ಲ ಮೂಲ ಕಾರಣ. ಬಡತನ, ಅಸ್ಪಶ್ಯತೆ ನನ್ನೊಬ್ಬನ ಒಳಬೇಗುದಿಯಾಗಿರಲಿಲ್ಲ. ಅದು ಈ ದೇಶದ ಪಿಡುಗಾಗಿತ್ತು.
ಕಾಲ ಸರಿಯಿತು. ದೇಶದ ಅರ್ಥಖಾತೆಗೆ ಮಂತ್ರಿಯಾದೆ. ಅರ್ಥ ವ್ಯವಸ್ಥೆಯ ಯಾವ ಸೌಲಭ್ಯಗಳೂ ಬಡವರನ್ನು ತಲುಪುತ್ತಿರಲಿಲ್ಲ. ಬ್ಯಾಂಕ್‌ಗಳಿಂದ ಸಾಲ ಪಡೆಯಬೇಕಾದರೆ ಲಂಚ ಕೊಡಬೇಕಿತ್ತು. ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಬಡವರಿಗಂತೂ ಸಾಲ ಕೈಗೆಟುಕದ ನಕ್ಷತ್ರ. ಇದನ್ನು ವಿರೋಧಿಸಿದೆ. ಸಾಲವನ್ನು ನೀಡುವ ಪ್ರಕ್ರಿಯೆ ಗೌಪ್ಯವಾಗಿ ನಡೆಯಬಾರದು. ಅದಕ್ಕಾಗಿ ದೇಶದಲ್ಲೇ ಪ್ರಪ್ರಥಮ ಬಾರಿಗೆ ಸಾಲಮೇಳಗಳನ್ನು ಆರಂಭಿಸಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಸಾಲ ಮೇಳಗಳು ನಡೆದವು. ಊರೂರು ಅಲೆದಾಡಿ ಜಾತಿ, ಧರ್ಮ, ಪಕ್ಷಗಳ ಮುಖ ನೋಡದೆ ಎಲ್ಲ ಬಡವರು, ಕಾರ್ಮಿಕರು, ಮಹಿಳೆಯರು, ರೈತರಿಗೆ ೫ ಲಕ್ಷ ರು.ವರೆಗೆ ಯಾವ ಜಾಮೀನನ್ನೂ ಪಡೆಯದೆ ಸಾಲ ನೀಡುವ ಏರ್ಪಾಡು ಮಾಡಿದೆ. ಇದಕ್ಕೆ ದೇಶದೆಲ್ಲೆಡೆಗಳಿಂದ ತೀವ್ರ ವಿರೋಧ ಎದುರಾಯಿತು. ಬ್ಯಾಂಕ್‌ಗಳಿಂದ ಭಾರಿ ಪ್ರತಿಭಟನೆಗಳು ನಡೆದವು. ಪಾರ್ಲಿಮೆಂಟ್‌ನಲ್ಲಿ ಗಲಾಟೆ ಮಾಡಿಸಿದರು. ನನ್ನ ಪ್ರಾಣಕ್ಕೆ ಅಪಾಯ ಬರುವವರೆಗೆ ಅದು ಮುಂದುವರಿಯಿತು. ಆಂಧ್ರಪ್ರದೇಶದ ಮೆಹಬೂಬ್ ನಗರದಲ್ಲಿ ನನ್ನ ದೇಹಕ್ಕೆ ಚೂರಿಯಿಂದ ಇರಿದರು. ನಾನೇನೂ ಧೃತಿಗೆಡಲಿಲ್ಲ, ಸಾಲಮೇಳವನ್ನೂ ನಿಲ್ಲಿಸಲಿಲ್ಲ.
ಸಣ್ಣವನಿರುವಾಗ ಎರಡು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಕನಿಷ್ಠ ಒಂದು ಅಂಗಿಯೂ ಇಲ್ಲದೆ ಹರಿದ ಚಡ್ಡಿಯಲ್ಲೇ ಶಾಲೆ ಕಲಿತವನು. ನಾನು ಮಾತಿಗೆ ನಿಂತರೆ ಜನ ಸ್ತಬ್ಧರಾಗಿ ಕೇಳುತ್ತಿದ್ದರು. ಅವರ ಕಣ್ಣುಗಳಲ್ಲಿ ನೀರು ಮಡುಗಟ್ಟುತ್ತಿತ್ತು. ಕರ್ನಾಟಕದ ೨೨೪ ಕ್ಷೇತ್ರಗಳಲ್ಲೂ ಸಾಲ ಮೇಳಗಳನ್ನು ನಡೆಸಿದೆ. ಪ್ರತಿ ಸಭೆಯಲ್ಲೂ ಲಕ್ಷಾಂತರ ಮಂದಿ ಬಡವರು ಸೇರುತ್ತಿದ್ದರು. ಇಡೀ ದೇಶದ ೨೫ ಕೋಟಿ ಜನರಿಗೆ ಇದೇ ಕೈಗಳಿಂದ ಸಾಲ ವಿತರಿಸಿದೆ. ಬಹಿರಂಗವಾಗಿ ಸಾಲ ನೀಡಿದ್ದರಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಕಡಿಮೆಯಾಯಿತು. ಬ್ಯಾಂಕ್ ಸಾಲ ನೀಡುವಾಗ ಲಂಚ ಪಡೆಯುವ ಪಿಡುಗೂ ನಿವಾರಣೆಯಾಯಿತು.
ನಮಗೆ ದೇವರಿರಲಿಲ್ಲ. ನಾವು ದೇವರನ್ನು ಮುಟ್ಟಬಾರದಿತ್ತು. ದೇವಾಲಯಗಳಿಗೂ ಪ್ರವೇಶ ಇರಲಿಲ್ಲ. ಬ್ರಹ್ಮಶ್ರೀ ನಾರಾಯಣ ಗುರುಗಳು ಗೋಕರ್ಣನಾಥನನ್ನು ಪ್ರತಿಷ್ಠಾಪಿಸಿ ನಮಗೆ ದೇವರನ್ನು ಕೊಟ್ಟರು. ನಾವು ಮನುಷ್ಯರಾದೆವು. ನಾನು ಮಂತ್ರಿಯಾಗಿದ್ದಾಗ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆಂದು ಆಡಳಿತ ಮಂಡಳಿಯವರು ನನ್ನ ಬಳಿ ಬಂದರು. ೨೫ ಲಕ್ಷ ರು. ಕೊಡುತ್ತೇನೆಂದ ವ್ಯಕ್ತಿಯೊಬ್ಬರು ಕೈ ಕೊಟ್ಟಾಗ ನಾನು ಸಾರ್ವಜನಿಕ ಸಭೆಗಳನ್ನು ನಡೆಸಿದೆ. ಅವಿಭಜಿತ ದ.ಕ. ಜಿಲ್ಲೆಯಾದ್ಯಂತ ಅಷ್ಟೇ ಅಲ್ಲ, ಬೆಂಗಳೂರು, ಮುಂಬೈನಲ್ಲೂ ಸಾರ್ವಜನಿಕ ಸಭೆಗಳನ್ನು ಮಾಡಿ ಹಣ ಒಟ್ಟು ಮಾಡಿದೆವು. ಒಂದು ದಿನ ಹೀಗೆ ಸಭೆಯಲ್ಲಿ ನಾನು ಮಾತನಾಡುತ್ತಿರಬೇಕಾದರೆ ಒಬ್ಬ ಭಿಕ್ಷುಕ ಬಂದ. ಹರಿದ ಚಡ್ಡಿಯ ಕಿಸೆಯಿಂದ ಐದು ಪೈಸೆಯ ನಾಣ್ಯ ತೆಗೆದು, ‘ನಾನು ಭಿಕ್ಷುಕ. ನನ್ನ ಬಳಿ ಇಷ್ಟೇ ಇರುವುದು. ಇದನ್ನು ತೆಗೆದುಕೊಳ್ತೀರಾ’ ಎಂದು ಕೇಳಿದ. ಆಶ್ಚರ್ಯವಾಯಿತು ನನಗೆ. ಅದೇ ಐದು ಪೈಸೆಯನ್ನು ಜನರಿಗೆ ತೋರಿಸಿದೆ. ನೋಡನೋಡುತ್ತಿದ್ದಂತೆ ೬೫ ಲಕ್ಷ ರು. ಗುರಿಯನ್ನೂ ಮೀರಿ ಕೋಟ್ಯಂತರ ರು. ಧನ ಸಂಗ್ರಹವಾಯಿತು. ಕೇವಲ ಹದಿಮೂರೇ ತಿಂಗಳಲ್ಲಿ ಬೃಹತ್ ದೇವಾಲಯ ತಲೆಯೆತ್ತಿ ನಿಂತಿತು. ಮುಂದೆ ಗೋಕರ್ಣನಾಥೇಶ್ವರ ಕಾಲೇಜು ಕೂಡ ಸ್ಥಾಪನೆಯಾಯಿತು. ಒಮ್ಮೊಮ್ಮೆ ಒಂದು ಶಕ್ತಿ ಎನ್ನುವುದು ಇರದಿದ್ದರೆ ಇದೆಲ್ಲ ಸಾಧ್ಯವಾಗುತ್ತಿತ್ತೇ ಎನಿಸುತ್ತದೆ. ದೇವಾಲಯದಲ್ಲಿ ಒಂದು ಲಾಡು, ಪ್ರಸಾದ ತೆಗೆದುಕೊಂಡರೂ ಅದರ ಹಣ ಕೊಟ್ಟಿದ್ದೇನೆ.
ನಾನು ಬಿಲ್ಲವನಾದರೂ ಬಿಲ್ಲವ ಎಸೋಸಿಯೇಶನ್‌ನ ಸದಸ್ಯನಲ್ಲ. ಕಾಲೇಜು ಆಡಳಿತ ಮಂಡಳಿಯಲ್ಲೂ ನಾನು ಸದಸ್ಯನಲ್ಲ. ಇನ್ನು ದೇವಾಲಯ. ಅದರಲ್ಲೂ ನಾನು ಸದಸ್ಯನಲ್ಲ. ನಮಗೆ ಕೊನೆಗೂ ದೇವಾಲಯ ಸಿಕ್ಕಿತು. ದೇವರನ್ನು ಕಂಡು, ಮುಟ್ಟಿ ನಮಸ್ಕರಿಸಿದೆವು. ಇಷ್ಟೆಲ್ಲ ಆಗುವ ಹೊತ್ತಿಗೆ ಚಿಕ್ಕ ಪ್ರಾಯದ ವಿಧವೆಯರ ತಲೆಯನ್ನು ಬೋಳಿಸಿ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದ ನೆನಪಿನ ಚಿತ್ರಗಳು ಕಣ್ಣ ಮುಂದೆ ಹರಿದವು. ಅವರೂ ಕೂಡ ಪರಮಾತ್ಮನ ಮಕ್ಕಳೇ. ಒಂಭತ್ತು ತಿಂಗಳ ಕಾಲ ಹೆತ್ತು ಹೊತ್ತು, ಮಕ್ಕಳಿಗೆ ದಾರಿದೀಪ ತೋರಿಸುವ ದೇವತೆ ಹೆಣ್ಣು. ಗಂಡ ಸತ್ತ ಮೇಲೆ ಅವರು ಅಪವಿತ್ರ ಹೇಗಾಗುತ್ತಾರೆ? ಯೋಚಿಸಿದೆ. ದೇಶದಲ್ಲೇ ಪ್ರಥಮ ಬಾರಿಗೆ ಎಲ್ಲ ಜಾತಿಗಳ ೫ ಸಾವಿರ ವಿಧವೆಯರನ್ನು ಸೇರಿಸಿ ದೇವಾಲಯದಲ್ಲಿ ಅವರ ಕೈಯಿಂದಲೇ ಚಂಡಿಕಾಹೋಮ ಮಾಡಿಸಿದೆ. ಅವರ ಕೈಗಳಿಗೆ ಬಳೆ ತೊಡಿಸುವ, ಹಣೆಗೆ ಕುಂಕುಮವನ್ನು ದೇವರೆದುರೇ ಇರಿಸುವ ಕೆಲಸ ಮಾಡಿದೆ. ಇಡೀ ದೇಶವೇ ಈ ಕಾರ್ಯಕ್ಕೆ ಬೆಂಬಲ ಕೊಟ್ಟಿತು.
ಮರುವರ್ಷ ಪರಿಶಿಷ್ಟ ಜಾತಿಯ ವಿಧವೆ ಶಿಕ್ಷಕಿಯನ್ನು ಕರೆಸಿ ಅವರಿಗೆ ನಾನೇ ಪಾದಪೂಜೆ ಮಾಡಿ ಆರತಿಯನ್ನು ಬೆಳಗಿದೆ. ಅದಾದ ನಂತರ ಹಿಂದುಳಿದ ವರ್ಗದ ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ವಿಧವೆಯರನ್ನು ಅರ್ಚಕಿಯರನ್ನಾಗಿ ನೇಮಕ ಮಾಡಿದೆ. ಗರ್ಭಗುಡಿಯಲ್ಲಿ ನಿಂತು ಶಿವನಿಗೆ ಅವರೇ ತಮ್ಮ ಕೈಯಾರೆ ಪೂಜೆ ಮಾಡಿದರು. ಇದಾದ ಮೇಲೆ ಮಥುರಾದಲ್ಲಿ ವಿಧವೆಯರಿಗೆ ಹೋಳಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಯಿತು. ಪಾಂಡವಪುರದಲ್ಲಿ ಪರಿಶಿಷ್ಟ ವರ್ಗದ ವಿಧವೆಯರನ್ನು ಅರ್ಚಕಿಯರನ್ನಾಗಿ ನೇಮಿಸಿದರು. ದೇಶಾದ್ಯಂತ ಅನೇಕ ಕಡೆಗಳಲ್ಲಿ ಪರಿವರ್ತನೆಯ ಯುಗ ಆರಂಭವಾಯಿತು.
ಈಗ ನಾನು ರಾತ್ರಿಯ ಏಕಾಂತದಲ್ಲಿ ಕುಳಿತು ಯೋಚಿಸುತ್ತೇನೆ. ಇಷ್ಟೆಲ್ಲ ಕೆಲಸಗಳು ಹೇಗಾದವು? ದಟ್ಟ ದಾರಿದ್ರ್ಯದಲ್ಲಿ ಹುಟ್ಟಿದ್ದರೂ ಇಡೀ ದೇಶದ ಅರ್ಥ ಖಾತೆಯೇ ನನ್ನ ಅಧೀನಕ್ಕೆ ಬಂದಿತ್ತು. ಆದರೆ ಒಂದು ಲೋಟ ನೀರು, ಒಂದೇ ಒಂದು ಬಾಳೆಹಣ್ಣನ್ನು (ಆಮಿಷ) ನನಗೆ ಕೊಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಮಂತ್ರಿಯಾಗಿ ಪ್ರವಾಸದಲ್ಲಿದ್ದಾಗ ಬರೀ ಬಿಸಿನೀರು- ಬಿಸ್ಕತ್ತೇ ನನಗೆ ಆಹಾರ. ಭಾರಿ ಭಕ್ಷ್ಯ ಭೋಜನಗಳನ್ನು ನೀಡಲು ಅಧಿಕಾರದಲ್ಲಿದ್ದವರು ಮುಂದೆ ಬರುತ್ತಿದ್ದರು. ಅದನ್ನು ಕಣ್ಣೆತ್ತಿಯೂ ನೋಡದೆ ಮುಂದೆ ಸಾಗುತ್ತಿದ್ದೆ. ಟಾಟಾ, ಬಿರ್ಲಾ, ಇದೇ ಅಂಬಾನಿಗಳ ಕೊಡುಗೆಗಳು, ಹಣ್ಣು ಹಂಪಲುಗಳ ಬುಟ್ಟಿಗಳು ಗೇಟ್‌ನಿಂದಲೇ ವಾಪಸ್ ಹೋಗುತ್ತಿದ್ದವು. ಈಗ ನಾನು ಯಾರಿಗೂ ಹೆದರದೆ ಮಾತನಾಡಲು ಸಾಧ್ಯವಾಗಿರುವುದು ಅಂತಹ ವ್ಯಕ್ತಿತ್ವದಿಂದಲೇ. ರಾಜಕಾರಣಿಯಾದವನು ಯಾವಾಗಲೂ ಪ್ರಾಮಾಣಿಕನಾಗಿರಬೇಕು.

 

billavaswarriors.com

***B Janardhana Poojary***


Share:

More Posts

Category

Send Us A Message

Related Posts

ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಶ್ರೀ ಗುರು ಸೇವಾ ಸಮಿತಿ ಬಹರೈನ್ ಬಿಲ್ಲವಾಸ್ ಕೂಟದ ವತಿಯಿಂದ 14-02-2025 ರಂದು ಅಧ್ಯಕ್ಷರಾದ ಹರೀಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಹರೈನ್ ನಲ್ಲಿ ಬಿಡುಗಡೆ


Read More »

ಸರ್ಕಾರಿ ಆಸ್ಪತ್ರೆಗಳಲ್ಲಿದೆ ಗುಣಮಟ್ಟದ ಚಿಕಿತ್ಸೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಶ್ಲಾಘನೆ


Share       ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲೂ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎನ್ನುವುದಕ್ಕೆ ವೆನ್ಲಾಕ್ ಆಸ್ಪತ್ರೆ ಉತ್ತಮ ನಿದರ್ಶನ. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ತಾತ್ಸಾರ ಬೇಡ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.


Read More »

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »