ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಹಾಗು ಉಡುಪಿ ತಾಲೂಕುಗಳಲ್ಲಿ ಮಾತ್ರ ಹೆಚ್ಚಾಗಿ ಈ ಕುಣಿತ ಕಂಡು ಬರುತ್ತದೆ. ದೀಪಾವಳಿ ಪಾಡ್ಯದಿಂದ ಮೊದಲ್ಗೊಂಡು ಪ್ರತೀ ಹಗಲಲ್ಲಿ ನಲಿಕೆ (ಪಾಣ) ಜನಾಂಗದವರು ಈ ಕುಣಿತವನ್ನು ನಡೆಸುತ್ತಾರೆ. ಗ್ರಾಮದ ಗುತ್ತು ಅಥವಾ ಗೂಡಿನ ಮನೆಯಿಂದ ಆರಂಭಿಸಿ ಎಲ್ಲಾ ಮನೆಗಳಿಗೂ ಹೋಗುತ್ತಾರೆ. ಇವರಿಗೆ ಸಂಭಾವನೆಯಾಗಿ ಮನೆಮನೆಯಿಂದ ಹಣ ಸಿಗುವುದಿಲ್ಲ. ಬದಲಿಗೆ ಅಕ್ಕಿ, ಎಣ್ಣೆ, ಉಪ್ಪು, ಮೆಣಸು ದೊರೆಯುತ್ತದೆ.ಮಾಂಕಾಳಿ ಕುಣಿತದಲ್ಲಿ ಒಬ್ಬ ನರ್ತಕ ಇರುತ್ತಾನೆ. ಈತ ಕಂಗಿನ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಮುಖಕ್ಕೆ ಹಿಡಿದುಕೊಳ್ಳುತ್ತಾನೆ. ಮುಖವಾಡವೆಂದರೆ ಕಣ್ಣು, ಮೂಗು, ತೆರೆದ ಬಾಯಿ, ಚಾಚಿದ ನಾಲಿಗೆಯನ್ನು ಬಿಳಿ, ಹಳದಿ, ಕಪ್ಪು, ಹಸಿರು, ಕೆಂಪು ಬಣ್ಣಗಳಿಂದ ತಯಾರಿಸುತ್ತಾರೆ. ಕುಣಿಯುವವ ಸೀರೆಯನ್ನು ನೆರಿಗೆ ಹಾಕಿ ಒಂದರ ಮೇಲೊಂದರಂತೆ ಹಂತಹಂತವಾಗಿ ಹಾಕಿ ಸೊಂಟಕ್ಕೆ ಕಟ್ಟಿಕೊಳ್ಳುತ್ತಾನೆ. ಕಾಲಿಗೆ ಗಗ್ಗರ ಕಟ್ಟಿ ಮೈಯನ್ನು ದೊಗಲೆ ಅಂಗಿಯಿಂದ ಮುಚ್ಚಿಕೊಳ್ಳುತ್ತಾನೆ. ಮುಖವಾಡದ ಹಿಂದಿನಿಂದ ಒಂದು ಸೀರೆಯನ್ನು ಇಳಿ ಬಿಟ್ಟಿರುತ್ತಾನೆ. ಇದು ಮುಖವಾಡ ಇಟ್ಟುಕೊಂಡ ವ್ಯಕ್ತಿಯ ಬೆನ್ನನ್ನು ಆವರಿಸುತ್ತದೆ. ಮುಖವಾಡವನ್ನು ಮುಖಕ್ಕೆ ಕಟ್ಟಿಕೊಳ್ಳುವುದಿಲ್ಲ. ಬದಲಿಗೆ ಎರಡು ಕೈಗಳಿಂದ ಮುಖದೆದುರು ಹಿಡಿದುಕೊಳ್ಳುತ್ತಾರೆ.
Watch Video is here: https://www.facebook.com/watch/?v=698187894157792
ಹಾಡು ಹೇಳುವಾತ ತೆಂಬರೆಯನ್ನು ಬಡಿದು ಹಾಡು ಹೇಳುತ್ತಿದ್ದಂತೆ ಇದರ ಲಯಕ್ಕನುಗುಣವಾಗಿ ನರ್ತಕ ಸಣ್ಣ ಹೆಜ್ಜೆಗಳನ್ನಿಟ್ಟು ಸುತ್ತು ಬರುತ್ತಾನೆ. ತೆಂಬರೆಯ ಬಡಿತ ನಿಧಾನವಾಗಿರುತ್ತದೆ. ಕೈಗಳಲ್ಲಿ ಮುಖವಾಡವನ್ನು ಮುಖಕ್ಕೆ ಎದುರಾಗಿ ಹಿಡಿದುಕೊಂಡಿರುವುದರಿಂದ ಕೈಗಳಲ್ಲಿ ಯಾವುದೇ ಭಂಗಿಯನ್ನು ಅಭಿನಯಿಸುವಂತಿಲ್ಲ. ಮುಖವಾಡವನ್ನೆತ್ತಿ ಕುಣಿತಗಾರ ನೆಲವನ್ನು ನೋಡಬೇಕಾಗಿರುವುದರಿಂದ ಕುಣಿತದಲ್ಲಿ ವೇಗ ಇರುವುದಿಲ್ಲ. ಈ ಸಂದರ್ಭದಲ್ಲಿ ಹೇಳುವ ಹಾಡು ತುಳು ಭಾಷೆಯಲ್ಲಿರುತ್ತದೆ. ಊರಿನ ರೋಗ ರುಜಿನಗಳನ್ನು ಹೋಗಲಾಡಿಸಲು ಘಟ್ಟದಿಂದ ಇಳಿದು ಮಾಂಕಾಳಿ ಬರುತ್ತಾಳೆ ಎಂಬ ನಂಬಿಕೆ ಜನಪದರಲ್ಲಿದೆ. ತುಳು ನಾಡಿನಲ್ಲಿ ಆಚರಣೆಯಲ್ಲಿರುವ ಅಟಿಕಳಿಂಜನು ಊರಿನ ಮಾರಿಯನ್ನು ನಿವಾರಿಸುವುದಕ್ಕಾಗಿ ಆಷಾಢ ಮಾಸದಲ್ಲಿ ವರ್ಷಕ್ಕೆ ಒಂದಾವರ್ತಿ ಗ್ರಾಮದಲ್ಲಿ ಬರುವುದು. ತುಳಸಿ ಪೂಜೆಯ ದಿನ ಮಾಂಕಾಳಿ ಕುಣಿತದ ಅಂತ್ಯ ಪೂಜೆ. ಆ ದಿನ ಸಂಭಾವನೆಯಾಗಿ ದೊರೆತ ಭತ್ತ, ಅಕ್ಕಿ, ತೆಂಗಿನಕಾಯಿ, ಉಪ್ಪು, ಹುಳಿ, ಮಸಿ, ಮೆಣಸುಗಳನ್ನು ಸರಳೀ ಎಲೆಯಲ್ಲಿ ಸಾಂಕೇತಿಕವಾಗಿ ಮನೆಯ ಪಕ್ಕದಲ್ಲಿ ಬಡಿಸಿಡುತ್ತಾರೆ, ಅದರ ಎದುರು ಮಾಂಕಾಳಿಯ ಮುಖವಾಡವನ್ನಿಟ್ಟು ಊರಿನ ಮಾರಿಯನ್ನು ಕಳೆಯುವಂತೆ ಪ್ರಾರ್ಥಿಸುತ್ತಾರೆ, ಹಾಗೂ ಮುಖವಾಡವನ್ನು ತೆಗೆದು ಹೊಳೆಯಲ್ಲಿ ಬಿಡುತ್ತಾರೆ. ಈ ಮೂಲಕವಾಗಿ ಊರಿನ ಮಾರಿಯನ್ನು ಹೊಳೆ ದಾಟಿಸುವ ಆಶಯವನ್ನು ಕಾಣಬಹುದಾಗಿದೆ.
(ಸಂಪಾದಕರು: ಪ್ರೊ. ಹಿ. ಚಿ. ಬೋರಲಿಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ. ಪುಟ ೨೬.)
Credits: Beauty of Tulunad facebook page