ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿ ಧರ್ಮ ಚಾವಡಿಯ ಒಳಾಂಗಣದ ಸುತ್ತು ಆವರಣಕ್ಕೆ ಮರದ ಕಡ್ಚಿಲ್ ಅಳವಡಿಸಲಾಗಿದೆ.
ಈಗ ಪಾವನ ಸಾನಿಧ್ಯದ ಸೌಂದರ್ಯ ಮತ್ತು ಧಾರ್ಮಿಕ ಕಳೆ ಇಮ್ಮಡಿಯಾಗಿದೆ.
ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ದೇಯಿ ಬೈದ್ಯೆತಿ – ಕೋಟಿ ಚೆನ್ನಯ ಮೂಲಸ್ಥಾನ ಆದಿ ದೈವ ಧೂಮಾವತಿ ಕ್ಷೇತ್ರ – ಸಾಯನ ಬೈದ್ಯರ ಗುರು ಪೀಠಬಡಗನ್ನೂರು ಗ್ರಾಮ, ಪಡುಮಲೆ, ಪುತ್ತೂರು ತಾಲೂಕು ದ.ಕ. ಯಲ್ಲಿದೆ.
ಐದು ಶತಮಾನಗಳ ಹಿಂದೆ ತುಳುನಾಡ ಮಣ್ಣಲ್ಲಿ ಅವತಾರ ತಾಳಿದ ಯಮಳ ವೀರರು ಕೋಟಿ-ಚೆನ್ನಯರು ನಾಡಿನಾದ್ಯಂತ 250 ಕ್ಕಿಂತಲೂ ಅಧಿಕ ಗರೋಡಿಗಳಲ್ಲಿ ಆರಾಧನೆ ಪಡೆಯುತ್ತಾ ಬಂದಿದ್ದು, ಇದೇ ಮೊದಲ ಬಾರಿಗೆ ತಮ್ಮ ಹುಟ್ಟೂರಿನಲ್ಲಿ ಉಪಾಸನೆ ಪಡೆಯುವ ಸುವರ್ಣ ಕಾಲ ಕೂಡಿ ಬಂದಿದೆ. ಹುಟ್ಟೂರಿನ ಈ ಆರಾಧನೆಯು, ಸ್ವತಃ ಕೋಟಿ ಚೆನ್ನಯರ ಮೂಲಸ್ಥಾನವಾದ ಗೆಜ್ಜೆಗಿರಿ ನಂದನ ಬಿತ್ತ್ ಲ್ ನಲ್ಲಿ ನಡೆಯುವ ಮೂಲಕ ಸಮಸ್ತ ಭಕ್ತರ ಪಾಲಿಗೆ ಸಂಭ್ರಮದ ಕ್ಷಣ ಎದುರಾಗಿದೆ. ಅದರಲ್ಲೂ ವಿಶೇಷವಾಗಿ ಮಾತೆ ದೇಯಿ ಬೈದ್ಯೆತಿ, ಗುರು ಸಾಯನ ಬೈದ್ಯರ ಸಹಿತ ಕೌಟುಂಬಿಕ ಚೌಕಟ್ಟಿನಲ್ಲಿ ನಡೆಯುವ ಮೂಲಸ್ಥಾನದ ಆರಾಧನೆ ಕೋಟಿ-ಚೆನ್ನಯರ ಉಪಾಸನಾ ಪರಂಪರೆಯಲ್ಲೇ ಕಲಶಪ್ರಾಯವಾಗಿ ಕಂಗೊಳಿಸಲಿದೆ.
ಕೋಟಿ ಚೆನ್ನಯರು ನಲಿದಾಡಿದ ಮಣ್ಣಿನಲ್ಲಿ.ಗೆಜ್ಜೆಗಿರಿ ನಂದನ ಬಿತ್ತಿಲ್ ಅವಳಿ ವೀರರ ಜನ್ಮದ ಮೂಲ ನೆಲೆ. ಅವರ ತರವಾಡು ಕ್ಷೇತ್ರ, ಮಾತ್ರವಲ್ಲ ಸ್ವತಃ ಕೋಟಿ-ಚೆನ್ನಯರು ಬಾಳಿ ಬೆಳಗಿದ ತಾಣ. ಮಾವ ಸಾಯನ ಬೈದ್ಯರ ಕರ್ಮಭೂಮಿಯೂ ಇದೇ, ಮಾತೆ ದೇಯಿ ಬೈದ್ಯೆತಿಗೆ ಪುನರ್ಜನ್ಮ ನೀಡಿದ ಮೂಲ ಸ್ಥಾನವೂ ಇದೇ. ಈ ಎಲ್ಲ ದೈವಾಂಶ ಸಂಭೂತರಿಂದ ಉಪಾಸನೆ ಪಡೆದ ಧೂಮಾವತಿ ದೈವದ ತಾಣವೂ ಇದೇ.