ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು ಅರ್ಪಿಸಿ ಬೆಳೆಸಿದಾಗಲೇ ಸಮಾಜದ ಮುಂದೆ ಬೃಹದ್ ವೃಕ್ಷವಾಗಿ ನಿಲ್ಲಲು ಸಾಧ್ಯ. ಅಂತಹ ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ನಿರೂಪಣಾ ಕ್ಷೇತ್ರದ ಬಹುಮುಖ ಪ್ರತಿಭೆಯ ಪರಿಚಯ ಮಾಡಿಕೊಳ್ಳುವ ಸಮಯವಿದು.
ಕೃತಿ ಮೂಡುಬೆಟ್ಟು ಸಾಮಾನ್ಯ ಮನೆಯಿಂದ ಬಂದು ತುಳುನಾಡಿನ ಉಡುಪಿ ಭಾಗದ ಜನರಿಗೆಲ್ಲ ಪರಿಚಯವಿರುವ ಒಬ್ಬ ಉದಯೋನ್ಮುಖ ಪ್ರತಿಭೆ. 2004ನೇ ಜುಲೈ 15ರಂದು ಮೂಡುಬೆಟ್ಟುವಿನ ಬಿಲ್ಲವ ಸಮಾಜದ ಕರುಣಾಕರ ಪೂಜಾರಿ ಮತ್ತು ಗೀತಾ ಪೂಜಾರಿಯವರ ಸುಪುತ್ರಿಯಾಗಿ ಜನಿಸಿದರು. ಇವರ ತಂದೆ ಕರುಣಾಕರ ಪೂಜಾರಿಯವರು ಮಣಿಪಾಲ ಮಾಹೆ ಸಂಸ್ಥೆಯ ಉದ್ಯೋಗಿ ಹಾಗೂ ತಾಯಿ ಗೀತಾಂಜಲಿ ಬಟ್ಟೆ ಮಳಿಗೆಯ ಉದ್ಯೋಗಿಯಾಗಿದ್ದಾರೆ. ಕೃತಿಯವರು ತನ್ನ ಬಾಲ್ಯದ ಶಿಕ್ಷಣವನ್ನು ಹುಟ್ಟೂರಲ್ಲೇ ಪೂರೈಸಿ, ಮುಂದೆ ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಝೂಯಾಲಜಿ ಕೆಮಿಸ್ಟ್ರಿಯಲ್ಲಿ ಬಿಎಸ್ಸಿ ಪದವಿಯನ್ನು ಪಡೆದರು. ಪ್ರಸ್ತುತ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಾರೆ.
ಪದವಿ ಮುಗಿಸಿದ ನಂತರ ಉಡುಪಿಯ ಸ್ಪಂದನಾ ಚಾನೆಲ್ನಿಂದ ಆರಂಭವಾದ ವೃತ್ತಿಕ್ಷೇತ್ರದ ಪಯಣ ತುಳುನಾಡ ಧ್ವನಿ, ಉಡುಪಿ ಟೈಮ್ಸ್, ಪ್ರೈಮ್ ಟಿವಿ ಕನ್ನಡ ಸೇರಿದಂತೆ ಉಡುಪಿಯ ಹೆಚ್ಚಿನೆಲ್ಲಾ ಪ್ರಾದೇಶಿಕ ಚಾನೆಲ್ಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಕೃತಿ ಮೂಡುಬೆಟ್ಟುರವರು ನಿರೂಪಣಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಪ್ರಸ್ತುತ ಸ್ಪೋರ್ಟ್ಸ್ ಕನ್ನಡ ಚಾನೆಲಲ್ಲಿ ನಿರೂಪಕಿಯಾಗಿ ವೃತ್ತಿಜೀವನವನ್ನು ಮುಂದುವರಿಸುತ್ತಿದ್ದಾರೆ.
ಟಿವಿ ರಿಯಾಲಿಟಿ ಸ್ಪರ್ಧೆಗಳಿಂದ ಸ್ಫೂರ್ತಿ ಪಡೆದುಕೊಂಡು ನೃತ್ಯ, ನಿರೂಪಣೆಯಲ್ಲಿ ಮುಂದುವರೆಯುವ ಕೃತಿ ಮೂಡುಬೆಟ್ಟು ಜಿಲ್ಲಾ ಮಟ್ಟದ ಸ್ಪರ್ಧಾ ವಿಜೇತೆಯಾಗಿ ಮಿಂಚಿದ್ದರು.
ಕಾತ್ಯಾಯಿನಿ ಟ್ಯೂಶನ್ ಕ್ಲಾಸ್ ಎಂಬ ಹೆಸರಿನಲ್ಲಿ ಎಲ್.ಕೆ.ಜಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಟ್ಯೂಶನ್ ತರಗತಿಯನ್ನು ಆರಂಭಿಸಿದವರು, ಮಕ್ಕಳ ನೆಚ್ಚಿನ ಶಿಕ್ಷಕಿಯಾಗಿದ್ದಾರೆ.
ರಂಗಕಲಾವಿದೆಯಾಗಿ ಗುರುತಿಸಿಕೊಂಡ ಕೃತಿಯವರು ಊರಿನಲ್ಲಿ ನಡೆಯುವ ನಾಟಕಗಳಲ್ಲಿ, ಬೀದಿನಾಟಕಗಳಲ್ಲಿ ಬಣ್ಣ ಹಚ್ಚಿ ಕಲಾರಸಿಕರಿಗೆ ತಮ್ಮ ಕಲಾನೈಪುಣ್ಯದ ರಸದೌತಣವನ್ನು ಉಣಬಡಿಸಿದ್ದಾರೆ.

ಎಳವೆಯಲ್ಲೇ ನೃತ್ಯ ಕಲಿಕೆಯ ಮೇಲೆ ಅತೀವ ಒಲವಿದ್ದ ಕೃತಿಯವರು ತನ್ನ ಸೋದರ ಸಂಬಂಧಿಯಾದ ವಿದ್ಯಾರವರಿಂದ ನೃತ್ಯಾಭ್ಯಾಸ ಮಾಡಿದವರು, ಮುಂದೆ ತನ್ನ ಪರಿಶ್ರಮದಿಂದ ಸ್ವಯಂ ಕಲಿಕೆಯೊಂದಿಗೆ ನೃತ್ಯ ಪರಿಣಿತಿ ಪಡೆದು ಶಾಲಾ ಕಾರ್ಯಕ್ರಮಗಳಲ್ಲಿ ನೃತ್ಯ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡರು. ಅಲ್ಲದೆ ತನ್ನ ಊರಿನ ಹಾಗೂ ಒಳಕಾಡು ಶಾಲಾ ವಿದ್ಯಾರ್ಥಿಗಳಿಗೆ, ತಾನು ಟ್ಯೂಶನ್ ನೀಡುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ.
ಚಾನೆಲ್ಗಳಲ್ಲಿ ನಿರೂಪಕಿಯಾಗಿ, ವಾರ್ತಾವಾಚಕಿಯಾಗಿರುವ ಜೊತೆಗೆ ಸಾಧಕಿಯರ ಪರಿಚಯ ಮಾಲಿಕೆ ನಮ್ಮೂರ ಜಾಣೆ ಕಾರ್ಯಕ್ರಮದ ಸಂದರ್ಶಕಿಯಾಗಿ ಸ್ಪಂದನಾ ಚಾನೆಲಲ್ಲಿ ತಮ್ಮ ವೃತ್ತಿಕೌಶಲ್ಯ ಮೆರೆದಿದ್ದಾರೆ. ಬ್ರಹ್ಮಕಲಶ, ಕ್ರೀಡಾಕೂಟ, ಆಟಿಕೂಟ, ರಸಮಂಜರಿ, ಉಡುಪಿ ತುಳುಕೂಟದ ಕಾರ್ಯಕ್ರಮಗಳನ್ನೂ ನಿರೂಪಿಸುವುದರೊಂದಿಗೆ, ಇತರೆ ಕೌಟುಂಬಿಕ ಕಾರ್ಯಕ್ರಮಗಳಾದ ಹುಟ್ಟುಹಬ್ಬ, ನಿಶ್ಚಿತಾರ್ಥ, ಮದುವೆ, ಸೀಮಂತದ ಕಾರ್ಯಕ್ರಮಗಳನ್ನೂ ನಿರೂಪಿಸಿ ಜನಮನ್ನಣೆ ಗಳಿಸಿದ್ದಾರೆ. ಹಲವು ಕಾರ್ಯಕ್ರಮಗಳನ್ನು ಸಂಯೋಜನೆ ಮಾಡಿ ಅದನ್ನು ಯಶಸ್ವಿಯಾಗಿಸುವುದರೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ನಿರೂಪಣಾ ಕ್ಷೇತ್ರದಲ್ಲಿ 300ರಿಂದ 400ರರಷ್ಟು ತುಳು, ಕನ್ನಡ ಕಾರ್ಯಕ್ರಮಗಳನ್ನು ನಿರೂಪಿಸುವುದರೊಂದಿಗೆ ತನ್ನ ಛಾಪು ಮೂಡಿಸಿದ್ದಾರೆ.
ತಮ್ಮ ನೆನಪಿನಂಗಳದಲ್ಲಿ ಮರೆಯದೆ ಅಚ್ಚುಳಿದ ಸಂಗತಿಗಳನ್ನು ನೆನಪಿಸುವ ಸಮಯದಲ್ಲಿ ಕೃತಿಯವರು “ಪಿಯುಸಿಯಲ್ಲಿ ವಿಜ್ಞಾನದಲ್ಲಿ 63 ಪ್ರತಿಶತ ಫಲಿತಾಂಶ ಬಂದಾಗ ಮನೆಯವರು ಇಷ್ಟು ಕಡಿಮೆ ಅಂಕ ತಗೊಂಡು ಏನು ಮಾಡುವೆ ಎಂದು ಪ್ರಶ್ನಿಸುವುದನ್ನು ನೋಡಿ ಬೇಸರದಿಂದ ಇನ್ಸ್ಟಾಗ್ರಾಂನಲ್ಲಿ ನೋಡಿ ಸ್ಪಂದನಾ ಚಾನೆಲ್ಗೆ ಹೋಗಿ ಸಂದರ್ಶನ ನೀಡಿ, ಪ್ರಥಮ ಸಂದರ್ಶನದಲ್ಲೇ ಆಯ್ಕೆ ಆಗಿದ್ದು ಮರೆಯಲಾಗದ ಘಟನೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ನಮ್ಮೂರ ಜಾಣೆ ಕಾರ್ಯಕ್ರಮದ ಸಂದರ್ಶನ ಮಾಡಿದ ಕ್ಷಣ, ಮೈಮ್ ಮಾಡಿದ ಕ್ಷಣ, ಕೆಲವೊಂದು ಸೆಲೆಬ್ರಿಟಿಗಳ ಜೊತೆ ಕಾರ್ಯಕ್ರಮದ ವೇದಿಕೆ ಹಂಚಿಕೊಂಡ ಕ್ಷಣಗಳು ಜೀವನದ ಅಮೂಲ್ಯ ಕ್ಷಣಗಳು” ಎನ್ನುತ್ತಾರೆ.
ಹೆಣ್ಣೊಬ್ಬಳು ಸಾಧನೆ ಮಾಡಬೇಕಾದರೆ ಅವಳಿಗೆ ಹೆಚ್ಚಿನ ಬೆಂಬಲ ನೀಡಬೇಕಾಗಿರುವುದು ಹೆತ್ತವರು. ಅಂತೆಯೇ ತನ್ನ ಇಂದಿನ ಸಾಧನಾ ಪಯಣಕ್ಕೆ ತನ್ನ ಹೆತ್ತವರು, ಕುಟುಂಬವರ್ಗದ ಜೊತೆಗೆ ತನ್ನ ಕಾರ್ಯಕ್ರಮದ ಸಮಯದಲ್ಲಿ ಜೊತೆಗೆ ಬಂದು ಸ್ಫೂರ್ತಿದುಂಬುವ ಗೆಳೆಯ ಗೆಳತಿಯರು, ಸ್ಪಂದನಾ ಚಾನೆಲ್ನ ಸಹೋದ್ಯೋಗಿಗಳು ಕಾರಣಕರ್ತರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಉದಯೋನ್ಮುಖ ಸಾಧಕಿಯಾಗಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಕೃಷ್ಣನ ನಗರಿಯ ಹೆಣ್ಣುಮಗಳು ಕೃತಿ ಮೂಡುಬೆಟ್ಟು ಇನ್ನಷ್ಟು ಸಾಧನೆ ಮಾಡಿ, ಪ್ರಶಸ್ತಿಗಳ ಸರಮಾಲೆಯಲ್ಲಿ ಕಂಗೊಳಿಸಲಿ. ಅವರ ಸಾಧನಾ ಹಾದಿಯ ಸತತ ಪರಿಶ್ರಮ ಹಾಗೂ ಮುನ್ನಡೆಯುವ ಮನಸ್ಸಿನ ಅಭಿಲಾಷೆಗೆ ದೇವರ ಆಶೀರ್ವಾದ ಸದಾ ಇರಲಿ ಎಂಬ ಶುಭಹಾರೈಕೆ ನಮ್ಮ ನಿಮ್ಮೆಲ್ಲರದಾಗಲಿ.
✍️ ಶ್ರೀಶಾವಾಸವಿ ತುಳುನಾಡ್




