ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025 ಗೆ ಆಯ್ಕೆಯಾಗಿರುತ್ತಾರೆ . ಬೆಂಗಳೂರಿನ” ಆರ್ಯಭಟ ಕಲ್ಚರಲ್ ಆರ್ಗನೈಶೇಶನ್ “ಕೊಡಮಾಡುವ ಈ ಪ್ರಶಸ್ತಿಯನ್ನು ವಿಶ್ವನಾಥ ಪೂಜಾರಿ ಕಡ್ತಲ ಇವರ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯನ್ನು ಗುರುತಿಸಿ ನೀಡಲಾಗಿದೆ . ಮೇ 22 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಜರಗಲಿದೆ . ಸಂಸ್ಥೆಯು ಪ್ರತೀ ವರ್ಷ ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ .
ವಿಶ್ವನಾಥ ಪೂಜಾರಿಯವರು ಪುಣೆಯಲ್ಲಿ ಹೋಟೆಲ್ ಉದ್ಯಮದಲ್ಲಿ ಯಶಸ್ಸನ್ನು ಕಂಡವರು . ಕೇವಲ ತಾನೊಬ್ಬನೇ ನೆಮ್ಮದಿಯಿಂದ ಇದ್ದರಷ್ಟೇ ಜೀವನವಲ್ಲ” ಪರರೆಲ್ಲ ನಮ್ಮವರು “ಎಂಬ ಮನೋಭಾವವನ್ನು ರೂಢಿಸಿಕೊಂಡು ಸಾಮಾಜಿಕ ಸೇವೆಯನ್ನು ನಿರಂತರವಾಗಿ ಅನುಸಂಧಾನಿಸಿಕೊಂಡು ಅದರಲ್ಲಿ ತೃಪ್ತಿಯನ್ನು ಕಂಡಿರುವವರು . ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಚುಕ್ಕಾಣಿ ಹಿಡಿದು ಸಂಘದಲ್ಲಿ ಹೊಸ ಸಂಚಲನವನ್ನು ಮೂಡಿಸಿ ಹಿರಿಕಿರಿಯರೆಲ್ಲರ ವಿಶ್ವಾಸಗಳನ್ನು ಗಳಿಸಿ ಮಾದರಿ ಸಂಘವನ್ನಾಗಿಸುವಲ್ಲಿ ಅವರ ಶ್ರಮ ಶ್ಲಾಘನೀಯವಾಗಿದೆ . ಸಂಘದ ಮೂಲಕ ವಿವಿಧ ಸಾಂಸ್ಕೃತಿಕ ,ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವುದಲ್ಲದೆ ಸಮಾಜಬಾಂಧವರ ಒಗ್ಗಟ್ಟಿಗಾಗಿ ಅಪಾರವಾಗಿ ಶ್ರಮಿಸುತ್ತಿದ್ದಾರೆ . ಪುಣೆ ರೆಸ್ಟೋರೆಂಟ್ & ಹೋಟೆಲಿಯರ್ಸ್ ಅಸೋಸಿಯೇಷನ್ ನಲ್ಲಿಯೂ ಸಕ್ರಿಯವಾಗಿದ್ದುಕೊಂಡು ಪುಣೆಯಲ್ಲಿರುವ ಯಾವುದೇ ಹೊಟೇಲಿಗರಿಗೆ ಅನ್ಯಾಯವಾದರೆ ತುರ್ತಾಗಿ ಧಾವಿಸಿ ಅವರಿಗೆ ನೈತಿಕ ಸ್ಥೈರ್ಯವನ್ನು ತುಂಬುವ ಮನೋಭಾವ ಅವರದ್ದಾಗಿದೆ . ಪುಣೆಯಲ್ಲಿರುವ ತುಳು ಕನ್ನಡಿಗರೆಲ್ಲರಲ್ಲೂ ಅನ್ಯೋನ್ಯವಾಗಿ ಗುರುತಿಸಿಕೊಂಡಿರುವುದಲ್ಲದೆ ನಾಡಿನ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುತ್ತಾರೆ . ಅಲ್ಲದೆ ತುಳುನಾಡಿನ ಭಾಷೆ ,ಸಂಸ್ಕೃತಿಗಳ ಬಗ್ಗೆ ಅಪಾರವಾದ ಆಸ್ಥೆಯಿರಿಸಿಕೊಂಡಿರುವುದಲ್ಲದೆ ಯಕ್ಷಗಾನ ,ನಾಟಕ ,ಚಲನಚಿತ್ರ ಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ .ಇತ್ತೀಚಿಗೆ ಪುಣೆ ಬಿಲ್ಲವ ಸಮಾಜಸೇವಾ ಸಂಘದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಕೆ ಇವರದ್ದಾಗಿದೆ .
ಭವಿಷ್ಯದಲ್ಲಿ ಇನ್ನಷ್ಟು ಸಾಮಾಜಿಕ ಸೇವೆಯ ಮೂಲಕ ಯಶಸ್ಸನ್ನು ಪಡೆಯಲಿ ಮತ್ತಷ್ಟು ಕೀರ್ತಿ ಗೌರವಗಳು ತಮ್ಮನ್ನು ಅರಸಿ ಬರಲಿ ಎಂಬ ಶುಭ ಹಾರೈಕೆಗಳು …...