ಬೆಳ್ತಂಗಡಿ ತಾಲ್ಲೂಕಿನ ಮೂಡುಕೋಡಿ ಗ್ರಾಮದ ಹೊಸೊಕ್ಲು ಮನೆಯ ಕೋಟ್ಯಪ್ಪ ಪೂಜಾರಿ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ. ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ವೇಣೂರು ವಿದ್ಯೊದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಿಕ್ಷಣ ಮತ್ತು ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ, ವಾಮದಪದವು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಲದಪದವು ಅಕ್ಷರ ಭಾರತಿ ವಿದ್ಯಾಲಯದಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಅನೀಶ್ ಅವರು ಸಂಗೀತ, ನೃತ್ಯ, ಛದ್ಮವೇಷ, ಪ್ರಹಸನ, ನಾಟಕ, ಏಕಪಾತ್ರಾಭಿನಯ ಮುಂತಾದವುಗಳಲ್ಲಿ ಎತ್ತಿದ ಕೈ. ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕನಾಗಿ, ಶಿಬಿರಾರ್ಥಿಯಾಗಿ, ತರಬೇತುದಾರನಾಗಿ ಸುಮಾರು ಹನ್ನೆರಡು ವಿಶೇಷ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಶಿಬಿರಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಅನೇಕ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕನಾಗಿ, ವೈವಿಧ್ಯಮಯ ಕಾರ್ಯಕ್ರಮಗಳ ಸಂಯೋಜಕನಾಗಿ, ತರಬೇತುದಾರನಾಗಿ ತೊಡಗಿಸಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಕಲಾ ಚಟುವಟಿಕೆಯ ಜತೆಗೆ ಸಾಹಿತ್ಯ ಚಟುವಟಿಕೆಗಳಲ್ಲಿ ಅನೀಶ್ ಗುರುತಿಸಿಕೊಂಡಿದ್ದಾರೆ. ಯುವ ಕವಿಯಾಗಿ ಕನ್ನಡ, ತುಳು ಕವನಗಳ ರಚನೆ ಮಾಡಿದ್ದಾರೆ. ಹಲವು ನಾಟಕಗಳಿಗೆ ಗೀತೆ ರಚನೆ ಮತ್ತು ಗಾಯನ ಹಾಡಿದ್ದಾರೆ. 35ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅವರ ರಚನೆಯ ‘ಮರ್ಲ್ ಕಟ್ಟೊರ್ಚಿ’ ತುಳು ಹಾಸ್ಯಮಯ ನಾಟಕ ಮೊದಲ ಪ್ರದರ್ಶನದಲ್ಲೇ ಯಶಸ್ವಿ ಪ್ರದರ್ಶನ ಕಂಡಿದೆ. ಬೆಳ್ತಂಗಡಿ ಶ್ರೀಗುರುಮಿತ್ರ ಸಮೂಹದ ಸಾಂಸ್ಕೃತಿಕ ತಂಡದ ಉಪಾಧ್ಯಕ್ಷನಾಗಿ, ಹಲವಾರು ನಾಟಕ ತಂಡಗಳ ಸದಸ್ಯನಾಗಿ ಗುರುತಿಸಿಕೊಂಡಿದ್ದಾರೆ. ತಾಲ್ಲೂಕು, ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ ಯುವಜನ ಮೇಳ, ಯುವಜನೋತ್ಸವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿದ್ದಾರೆ.
ಜೀ ಕನ್ನಡದ ರಿಯಾಲಿಟಿ ಶೋಗಳಾದ ಕಾಮಿಡಿ ಕಿಲಾಡಿಗಳು, ಕಿಲಾಡಿ ಕುಟುಂಬ, ಕಾಮಿಡಿ ಕಿಲಾಡಿಗಳು ಚಾಂಪಿಯನ್ ಶಿಪ್ ಮುಂತಾದ ಶೋಗಳಲ್ಲಿ ಭಾಗವಹಿಸಿ ಇಡೀ ಕರ್ನಾಟಕದಾದ್ಯಂತ ಮೆಚ್ಚುಗೆ ಗಳಿಸಿದ್ದಾರೆ. ತುಳುವಿನ ಅಪ್ಪೆ ಟೀಚರ್,ಕನ್ನಡ ಕಾನೂರಾಯಣ,ಮಹಾನವ್ಯ,ಭೂನಾಟಕ ಮಂಡಳಿ,ಐ ಲವ್ ಯು, 0% ಲವ್ ಸ್ಟೋರಿ, ಮುಂತಾದ ಸಿನಿಮಾಗಳಲ್ಲಿ…ಬಣ್ಣ ಹಚ್ಚಿದ್ದಾರೆ.
ಇವರು ಬರೆದಿರುವ ರಂಗನಾಟಕ ನೇತ್ರೆ, ಈಗಾಗಲೇ 15ಕ್ಕೂ ಹೆಚ್ಚು ಪ್ರದರ್ಶನ ಕಂಡು ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಈ ನಾಟಕವು ಪಡೆದಿದೆ. ಸ್ಮಿತೇಶ್ ಎಸ್ ಬಾರ್ಯರವರು ನಿರ್ದೇಶಿಸಿರುವ ಅಂತರಂಗ ಕಿರುಚಿತ್ರಕ್ಕೆ ರಾಜ್ಯಮಟ್ಟದ ಉತ್ತಮ ನಟ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಹಾಗೂ ಈ ಚಿತ್ರಕ್ಕೆ ಐದು ರಾಜ್ಯ ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ವೇಣೂರಿನ ಹಲವು ಯುವಕರೊಂದಿಗೆ ಸೇರಿಕೊಂಡು ಕಲಾಕಾರ್ ಎಂಬ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸದ್ಯಕ್ಕೆ ”ಕನಸು ಮಾರಾಟಕ್ಕಿದೆ” ಎಂಬ ಚಲನಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬೆರದು ಸ್ವತಃ ನಟಿಸಿದ್ದಾರೆ. “ಕನಸು ಮಾರಾಟಕ್ಕಿದೆ ” ಸ್ಮಿತೇಶ್ ಎಸ್ ಬಾರ್ಯ, ನಿರ್ದೇಶನದ ಈ ಚಿತ್ರವಾಗಿದೆ. ವಾರಗಳ ಹಿಂದೆಯಷ್ಟೆ ಟೀಸರ್ ಬಿಡುಗಡೆಯಾಗಿದ್ದು, ಭಾರಿ ಜನಪ್ರೀಯತೆಯನ್ನು ಹೂಂದಿದೆ.