ಕುಂದಾಪುರ: ಅವಳಿ ಜವಳಿ ಮಕ್ಕಳು ಅಂದಮೇಲೆ ಅವರ ರೂಪ, ಬಣ್ಣ, ನಡವಳಿಕೆ ಹಾಗೂ ಆಲೋಚನೆಗಳಲ್ಲಿ ಸಾಮ್ಯತೆ ಇರುವುದು ಸಹಜ ಸಂಗತಿ. ಆದರೆ, ಕುಂದಾಪುರದ ಈ ಇಬ್ಬರು ಸಹೋದರಿಯರು ಶೈಕ್ಷಣಿಕ ಸಾಧನೆಯಲ್ಲೂ ತಾವು ಸಂಪೂರ್ಣವಾಗಿ ‘ಸೇಮ್ ಟು ಸೇಮ್’ ಎಂದು ಸಾಬೀತುಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ! ಇತ್ತೀಚೆಗೆ ಪ್ರಕಟಗೊಂಡ ಎಸ್ಎಸ್ಎಲ್ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಈ ಅವಳಿ ಸಾಧಕಿಯರು ನಿಖರವಾಗಿ ಸಮಾನ ಅಂಕಗಳನ್ನು ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಈ ಅಪರೂಪದ ಸಾಧನೆ ಮಾಡಿದವರು ಕುಂದಾಪುರ ತಾಲ್ಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ವಂಡ್ಲೆ-ನೆಂಪುವಿನ ವಿದ್ಯಾರ್ಥಿನಿಯರಾದ ಸಮೀಕ್ಷಾ ಎಸ್. ಪೂಜಾರಿ ಮತ್ತು ಪ್ರತೀಕ್ಷಾ ಎಸ್. ಪೂಜಾರಿ. ಪ್ರಕಟಗೊಂಡ ಫಲಿತಾಂಶದಲ್ಲಿ ಇಬ್ಬರೂ ಸಹೋದರಿಯರು ನಿಖರವಾಗಿ ತಲಾ 602 ಅಂಕಗಳನ್ನು ಪಡೆಯುವ ಮೂಲಕ ಶೈಕ್ಷಣಿಕ ವಲಯದಲ್ಲಿ ‘ಅವಳಿ ಪವಾಡ’ ಸೃಷ್ಟಿಸಿದ್ದಾರೆ.
ಈ ವಿದ್ಯಾರ್ಥಿನಿಯರ ಯಶಸ್ಸಿನ ಹಿಂದೆ ಆದರ್ಶ ಶಿಕ್ಷಕ ತಂದೆಯ ಪ್ರೇರಣೆ ದೊಡ್ಡದಿದೆ. ಬಸೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಹಾಗೂ ಇಸಿಓ (ECO) ಆಗಿ ಸೇವೆ ಸಲ್ಲಿಸುತ್ತಿರುವ ಸಂತೋಷ್ ಮತ್ತು ಪ್ರೇಮಾ ದಂಪತಿಯ ಪುತ್ರಿಯರಿವರು. ತಾವೊಬ್ಬ ಸರ್ಕಾರಿ ಶಿಕ್ಷಕರಾಗಿದ್ದುಕೊಂಡು, ತಮ್ಮ ಮಕ್ಕಳನ್ನೂ ಸರ್ಕಾರಿ ಶಾಲೆಯಲ್ಲೇ ಓದಿಸಿ, ಅವರು ಉತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸಿದ ಸಂತೋಷ್ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಂಡ್ಲೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಮತ್ತು ಕೆಪಿಎಸ್ ನೆಂಪುನಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದ ಈ ಜೋಡಿ ಪ್ರತಿಭೆಗಳು, ಶ್ರದ್ಧೆಯಿಂದ ಓದಿದರೆ ಸಾಧನೆಗೆ ಭೌತಿಕ ಸೌಲಭ್ಯಗಳಿಗಿಂತ ದೃಢ ಸಂಕಲ್ಪ ಮುಖ್ಯ ಎಂಬುದನ್ನು ನಿರೂಪಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ‘ಅವಳಿ ಪವಾಡ’ದ ಸುದ್ದಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಗೂ ಸಾರ್ವಜನಿಕರು ಈ ಸಾಧಕಿಯರಿಗೆ ಅಭಿನಂದನೆಗಳ ಸುರಿಮಳೆಗರೆಯುತ್ತಿದ್ದಾರೆ.






