Noಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಬಿಲ್ಲವಾಸ್ ಕತಾರ್ ರವರ ವತಿಯಿಂದ ದಿನಾಂಕ ೧೧.೦೪.೨೦೨೫ ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕಿಮ್ಸ್ ಮೆಡಿಕಲ್ ಸೆಂಟರ್, ಅಲ್ ಮಿಶಾಫ್, ಕತಾರ್ ಅವರ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಸುಮಾರು ೨೦೦ಕ್ಕೂ ಮಿಕ್ಕಿ ಜನರು ಪಾಲುಗೊಂಡಿದ್ದು, ಬಿಲ್ಲವಾಸ್ ಕತಾರ್ ತನ್ನ ಸಮಾಜ ಸೇವೆಯಲ್ಲಿ ಇನ್ನೊಂದು ಮೈಲಿಗಲ್ಲು ಸೃಷ್ಟಿಸಿತು. ಆರೋಗ್ಯ ತಪಾಸಣೆಯೊಂದಿಗೆ ಉಚಿತ ವೈದ್ಯಕೀಯ ಸಲಹೆಯ ಪ್ರಯೋಜನವನ್ನು ಶಿಬಿರಾರ್ಥಿಗಳು ಪಡೆದರು.
ಬಿಲ್ಲವಾಸ್ ಕತಾರ್ ನ ಕಾರ್ಯದರ್ಶಿ ಶ್ರೀ ಉಮೇಶ್ ಪೂಜಾರಿಯವರು ತಮ್ಮ ಆರಂಭಿಕ ಮಾತುಗಳಿಂದ ಕಾರ್ಯಕ್ರಮಕ್ಕೆ ಚಾಲನೆ ಇತ್ತರು. ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶರತ್ ಅವರು ಎಲ್ಲಾ ಆಹ್ವಾನಿತರನ್ನು ಸ್ವಾಗತಿಸುತ್ತಾ, ಸಮಾಜಸೇವೆ ಮತ್ತು ಸಮಾಜ ಕಲ್ಯಾಣಕ್ಕಾಗಿ ಬಿಲ್ಲವಾಸ್ ಕತಾರ್ ಸದಾ ಕಟಿಬದ್ಧವಾಗಿದೆ ಮತ್ತು ಅದರೊಂದಿಗೆ ಎಲ್ಲರೂ ಕೈ ಜೋಡಿಸಿ ಸಹಕರಿಸಿತ್ತಿರುವುದು ನಮ್ಮ ಇಚ್ಚಾಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಸಹಬಾಳ್ವೆಯ ಸಂಕೇತವಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಭಾರತೀಯ ಸಾಂಸ್ಕ್ರತಿಕ ಕೇಂದ್ರ ( ಐ.ಸಿ. ಸಿ.), ಕತಾರ್ ನ ಅಧ್ಯಕ್ಷರಾದ ಶ್ರೀ ಮಣಿಕಂಠನ್ ಏ.ಪಿ. ಬಿಲ್ಲವಾಸ್ ಕತಾರ್ ಅವರ ಅಧಿಕಾರಾವಧಿಯಲ್ಲಿ ನೋಂದಣಿಗೊಂಡಿದ್ದು, ಇತ್ತೀಚೆಗೆ ಮಹಿಳಾ ದಿನಾಚರಣೆ ಮತ್ತು ಮೀನುಗಾರರೊಂದಿಗೆ ಇಫ್ತಾರ್ ಕೂಟ ಇತ್ಯಾದಿ ಸಮಾಜ ಸೇವೆಯ ಮೂಲಕ ಭಾರತೀಯರೊಂದಿಗೆ ಸಕ್ರಿಯವಾಗಿ ಸ್ಪಂದಿಸುತ್ತಿರುವುದು ತುಂಬಾ ಸಂತೋಷ ಕೊಟ್ಟಿದೆ ಎಂದರು. ಮನುಷ್ಯನ ಬದುಕಿನಲ್ಲಿ ಆರೋಗ್ಯವೇ ಭಾಗ್ಯ, ಮುನ್ನೆಚ್ಚರಿಕೆಯ ಕ್ರಮ ಮುಂಬರುವ ಅನಾಹುತವನ್ನು ತಪ್ಪಿಸುವಲ್ಲಿ ಅತ್ಯಮೂಲ್ಯ ಮತ್ತು ಇಂತಹ ಆರೋಗ್ಯ ತಪಾಸಣಾ ಶಿಬಿರ ಅದಕ್ಕೊಂದು ದಾರಿದೀಪ ಎಂದು ಹೊಗಳಿದರು. ಶ್ರೀ ದೀಪಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ, ಐ. ಸಿ. ಬಿ. ಎಫ್., ಕತಾರ್ ಅವರು ಐ. ಐ. ಸಿ. ಬಿ. ಎಫ್. ಜೀವ ವಿಮೆಯ ಬಗ್ಗೆ ತಿಳಿಸಿದರು.
ಐ. ಸಿ. ಸಿ. ಸಾಂಸ್ಕೃತಿಕ ಚಟುವಟಿಕೆಗಳ ಮುಖ್ಯಸ್ಥೆ ಶ್ರೀಮತಿ ನಂದಿನಿ, ಶ್ರೀಮತಿ ಮಿಲನ್ ಅರುಣ್, ಮಾಜಿ ಅಧ್ಯಕ್ಷೆ, ಐ.ಸಿ.ಸಿ., ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಐ.ಸಿ.ಸಿ ಮಾಜಿ ಉಪಾಧ್ಯಕ್ಷ ಹಾಗೂ ಐ. ಎಸ್. ಸಿ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಐ.ಸಿ.ಬಿ.ಎಫ್. ಅಧ್ಯಕ್ಷ ಶ್ರೀ ಶಾನವಾಸ್ ಬಾವಾ ಅವರು ಮಾತನಾಡಿ ಶಿಬಿರದ ಸದುದ್ದೇಶ ತುಂಬಾ ಸಮಾಜಕ್ಕೆ ಸಹಾಯಕಾರಿಯಾದದ್ದು ಎಂದರು. ಐ. ಎಸ್. ಸಿ. ಅಧ್ಯಕ್ಷ ಶ್ರೀ ಇ.ಪಿ. ಅಬ್ದುಲ್ ರಹ್ಮಾನ್ ಅವರು ಮಾತನಾಡಿ ವಾಹನದ ಸೂಚ್ಯ ದೀಪದಂತೆ ನಮ್ಮ ದೇಹವು ಕೆಲವೊಂದು ಸಂಕೇತವನ್ನು ಕೊಟ್ಟಾಗ ಅಥವಾ ಮುನ್ನೆಚ್ಚರಿಕೆಯಂತೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ ಮತ್ತು ಇಂತಹ ಕಾರ್ಯಕ್ರಮಗಳು ತುಂಬಾ ಸಹಕಾರಿ ಎಂದರು. ಬಿಲ್ಲವಾಸ್ ಕತಾರ್ ಈ ನಿಟ್ಟಿನಲ್ಲಿ ತುಂಬಾ ಸಕ್ರಿಯವಾಗಿ ಶ್ರಮಿಸುತ್ತಿರುವುದು ನಮ್ಮೆಲ್ಲರ ಗಮನ ಸೆಳೆದಿದೆ ಎಂದರು.
ಕಿಮ್ಸ್ ಮೆಡಿಕಲ್ ಸೆಂಟರ್ ಆಡಳಿತ ಮಂಡಳಿಯ ಪ್ರತಿನಿಧಿಯಾಗಿ ಡಾ. ರಾಹುಲ್ ಮುನಿಕೃಷ್ಣ ಅವರು ಮಾತನಾಡಿ ಬಿಲ್ಲವಾಸ್ ಕತಾರ್ ನ ಸಹಯೋಗ ನಮಗೆ ಸದವಕಾಶವನ್ನು ಕೊಟ್ಟಿದ್ದು ನಾವು ಸದಾ ಆರೋಗ್ಯವನ್ನು ಕಾಪಾಡುವಲ್ಲಿ ತಮ್ಮ ಸೇವೆಯನ್ನು ಮುಡಿಪಾಗಿಟ್ಟಿದ್ದೇವೆ ಎಂದು ಭರವಸೆಯನ್ನಿತ್ತರು.
ಈ ಸಂದರ್ಭದಲ್ಲಿ ನಮ್ಮ ಕರೆಗೆ ಓಗೊಟ್ಟು ಮತ್ತು ನಮ್ಮ ಎಲ್ಲಾ ಕಾರ್ಯಕ್ರಮಗಳ ಬೆನ್ನೆಲುಬಾಗಿ ಸದಾ ಹುರಿದುಂಬಿಸುವ ಹಲವಾರು ಮಹನೀಯರು ಪಾಲುಗೊಂಡಿದ್ದರು. ಹಿರಿಯ ಸಮಾಜ ಸೇವಾಕರ್ತ ಶ್ರೀ ಚಿದಾನಂದ ನಾಯ್ಕ್, ಪ್ರಧಾನ ವ್ಯವಸ್ಥಾಪಕರು, ಎಂ. ಪಲ್ಲೊಂಜಿ ಕತಾರ್ , ಶ್ರೀ ಎಂ.ರವಿ ಶೆಟ್ಟಿ, ಅಧ್ಯಕರು, ಕರ್ನಾಟಕ ಸಂಘ, ಕತಾರ್, ಶ್ರೀ ಸಂದೇಶ್ ಆನಂದ್, ಅಧ್ಯಕರು, ತುಳುಕೂಟ ಕತಾರ್, ಶ್ರೀ ನವೀನ್ ಶೆಟ್ಟಿ, ಅಧ್ಯಕ್ಷರು ಬಂಟ್ಸ್ ಕತಾರ್, ಶ್ರೀ ಇಮ್ರಾನ್ ಅಹ್ಮದ್ ಬಾವ, ಅಧ್ಯಕ್ಷರು, ಎಸ್.ಕೆ.ಎಮ್.ಡಬ್ಲ್ಯೂ, ಕತಾರ್, ಶ್ರೀ ರಘುನಾಥ್ ಅಂಚನ್, ಸಲಹಾಧ್ಯಕ್ಷರು, ಬಿಲ್ಲವಾಸ್ ಕತಾರ್, ಸಂದೀಪ್ ಸಾಲಿಯಾನ್, ಮಾಜಿ ಅಧ್ಯಕ್ಷರು, ಬಿಲ್ಲವಾಸ್ ಕತಾರ್ ಹೀಗೆ ಇನ್ನೂ ಹಲವಾರು ಗಣ್ಯರ ಉಪಸ್ಥಿತಿ ಶಿಬಿರದ ಸಾರ್ಥಕತೆಯನ್ನು ಹೆಚ್ಚಿಸುವುದರೊಂದಿಗೆ , ಕೊಲ್ಲಿ ರಾಷ್ಟ್ರದಲ್ಲಿ ಭಾರತೀಯರ ಒಗ್ಗಟ್ಟನ್ನು ಮೆರೆಯಿಸಿತು.
ಬಿಲ್ಲವಾಸ್ ಕತಾರ್ ನ ಹೊಸ ಅಧಿಕೃತ ಲಾಂಛನ (ಲೋಗೋ)ವನ್ನು ಇದೇ ಸಂದರ್ಭದಲ್ಲಿ ಐ.ಸಿ. ಸಿ., ಕತಾರ್ ನ ಅಧ್ಯಕ್ಷ ಶ್ರೀ ಮಣಿಕಂಠನ್ ಅವರು ಬಿಡುಗಡೆಗೊಳಿಸಿದರು. ಈ ಲಾಂಛನ ಬಿಲ್ಲವಾಸ್ ಕತಾರ್ ನ ನವದೃಷ್ಟಿ ಮತ್ತು ಅಸ್ತಿತ್ವವನ್ನು ಬಿಂಬಿಸುವ ಸಂಕೇತವಾಗಿದೆ.
ಬಿಲ್ಲವಾಸ್ ಕತಾರ್ ನ ಅರಳು ಪ್ರತಿಭೆ ಕುಮಾರಿ ಭೂಮಿಕಾ ರಘುನಾಥ್ ಅಂಚನ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿ ಕೊಟ್ಟರು. ಸಂಘದ ಉಪಾಧ್ಯಕ್ಷ ಜಯರಾಮ ಸುವರ್ಣ ಅವರು ಬಿಲ್ಲವಾಸ್ ಕತಾರ್, ಕಿಮ್ಸ್ ಹೆಲ್ತ್ ಮೆಡಿಕಲ್ ಸೆಂಟರ್ ಮತ್ತು ಭಾಗವಹಿಸಿದ ಎಲ್ಲಾ ಮಹನೀಯರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುವುದರ ಮೂಲಕ ಭವಿಷ್ಯದಲ್ಲಿ ಹೆಚ್ಚಿನ ಸಹಯೋಗದ ಪ್ರಯತ್ನಗಳನ್ನು ಎದುರು ನೋಡುತ್ತಿದ್ದೇವೆ ಎಂದರು.