ನಾನು ನನ್ನವರು ಎಂಬ ಈ ಕಾಲ ಘಟ್ಟದಲ್ಲಿ ಸಮಾನ ಮನಸ್ಕರ ಜೊತೆ ಸೇರಿ ದುಡಿದದ್ದರಲ್ಲಿ ಸ್ವಲ್ಪ ಪಾಲನ್ನು ಸಮಾಜಕ್ಕಾಗಿ ವಿನಿಯೋಗಿಸುವ ಮಹೋನ್ನತ ಕಾರ್ಯಗೈಯುತ್ತಿರುವ ವ್ಯಕ್ತಿ ದಿನಕರ ಪೂಜಾರಿ.
ವಿದೇಶದಲ್ಲಿದ್ದು ಸಂಕಷ್ಟದ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಿದ ಮಹನೀಯ. ಇದಕ್ಕೆ ಕಾರಣ ತಾನು ಬಾಲ್ಯದಲ್ಲಿ ಅನುಭವಿಸಿದ ಕಷ್ಟದ ಅನುಭವಗಳು. ವಿದ್ಯೆ ಪಡೆಯುವ ಹಂಬಲವಿದ್ದರೂ ಆರ್ಥಿಕತೆಯ ಬೆಂಬಲವಿಲ್ಲದೆ ಪರಿತಪಿಸಿದ ಕ್ಷಣಗಳು ಇಂದಿಗೂ ಅವರಿಗೆ ಕಹಿ ನೆನಪು.
ಸಕ್ಕರೆ ಮನಸಿನ ದಿನಕರ್ ಪೂಜಾರಿ ಇವರು ಕಾರ್ಕಳ ತಾಲೂಕಿನ ನಕ್ಕರೆ ಎನ್ನುವ ಗ್ರಾಮದಲ್ಲಿ ಬಾಬು ಪೂಜಾರಿ ಮತ್ತು ಉಮಾವತಿ ಇವರಿಗೆ ಕೊನೆಯ ಮಗನಾಗಿ ಜನಿಸುತ್ತಾರೆ. ಬಾಲ್ಯದಲ್ಲಿ ಒಂದನೇ ತರಗತಿಯಿಂದ ನಾಲ್ಕನೆಯವರೆಗೆ ಪಾಡ್ಯ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿ, 5ನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ನಕ್ರೆ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿದರು. ಬಡತನದ ಬೇಗುದಿಯ ಅನುಭವದಿ ಭವಿಷ್ಯದ ಚಿಂತೆಯ ಜೊತೆಗೆ ಓದಿನ ಆಸಕ್ತಿಯಿಂದ 15ನೇ ವಯಸ್ಸಿಗೆ
ಮುಂಬೈಗೆ ಬಂದು ಮುಂಬೈ ಕೆಬಿಎಸ್ ಕಾಲೇಜ್ ನಲ್ಲಿ ವ್ಯಾಸಾಂಗ ಮುಗಿಸಿ, ಭವಿಷ್ಯ ರೂಪಿಸುವ ದೃಢ ನಿರ್ಧಾರದಿಂದ ಕ್ಯಾಂಟೀನ್ ನಲ್ಲಿ ಕೆಲಸಕ್ಕೆ ಸೇರಿ, ಮುಂದೆ ತನ್ನದೇ ಆದ ಸ್ವಂತ ರೆಸ್ಟೋರೆಂಟ್ ಮತ್ತು ಬಾರುಗಳನ್ನು ನಡೆಸಿಕೊಂಡು ಬರುವಷ್ಟರಮಟ್ಟಿಗೆ ಆತ್ಮವಿಶ್ವಾಸ ಬೆಳೆಸಿಕೊಂಡರು.
2009 ನೇ ಇಸವಿಯಲ್ಲಿ ಉದ್ಯೋಗದ ನಿಮಿತ್ತ ಇಸ್ರೇಲ್ ನಲ್ಲಿ ನೆಲೆಸಿ ಫೈನಾನ್ಸ್ ಉದ್ಯೋಗವನ್ನು ಮಾಡುತ್ತಾರೆ. ಇದೀಗ ಅನಿವಾಸಿ ಭಾರತೀಯರಾಗಿದ್ದು, ಇಸ್ರೇಲ್ ನಲ್ಲಿ ತಮ್ಮದೇ ರೀತಿಯಲ್ಲಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಎಲ್ಲಾ ಸಂಘ-ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ದಾನ ಧರ್ಮ ಅಂತ ಬಂದರೆ ಸರ್ವಧರ್ಮದವರಿಗೂ ದಾನ ಮಾಡುವುದು ಇವರ ದೊಡ್ಡ ಗುಣವಾಗಿದೆ.
ಸುಮಾರು 5 ವರ್ಷಗಳಿಂದ “ಆಶಾಕಿರಣ ಹೆಲ್ಪಿಂಗ್ ಫಂಡ್ ಇಸ್ರೇಲ್” ಎನ್ನುವ ಸಂಘಟನೆ ಮಾಡಿ, ಇಸ್ರೇಲ್ ನಲ್ಲಿರುವ ಸ್ನೇಹಿತರನ್ನು ಸೇರಿಸಿಕೊಂಡು ಆ ಸಂಘಟನೆಯಿಂದ ಸುಮಾರು 50 ಲಕ್ಷದವರೆಗೆ ಭಾರತದಲ್ಲಿರುವ ಅಸಹಾಯಕ ಕುಟುಂಬಗಳಿಗೆ ನೆರವಾಗುವುದರಲ್ಲಿ ಇವರ ಕೊಡುಗೆ ಅವಿಸ್ಮರಣೀಯ.
ಮುಂದೆ 2023ರಲ್ಲಿ ತನ್ನಂತೆ ಇರುವ 15 ಜನರ ಸಮಾನ ಮನಸ್ಕರನ್ನು ಸೇರಿಸಿಕೊಂಡು ಇಸ್ರೇಲ್ ನಲ್ಲಿ “ಓಂ ನಾರಾಯಣಗುರು ಹೆಲ್ಪಿಂಗ್ ಗ್ರೂಪ್ ಇಸ್ರೇಲ್” ಎನ್ನುವ ಸಂಸ್ಥೆಯನ್ನು ಸಂಘಟಿಸಿ ಅದರ ಮೂಲಕ 10 ಲಕ್ಷದಷ್ಟು ಭಾರತದಲ್ಲಿರುವ ಸಂಕಷ್ಟ ಕುಟುಂಬಗಳಿಗೆ ಸಹಾಯ ಮಾಡಿರುತ್ತಾರೆ. ಅದೇ ರೀತಿ ಇಸ್ರೇಲ್ ನಲ್ಲಿ ನೆಲೆಸಿರುವ ತನ್ನ ಊರಿನ ಜನರಿಗೆ ಯಾವ ಕಷ್ಟದ ಸಮಯದಲ್ಲಾದರೂ ಮನೆಯವರ ರೀತಿ ಸ್ಪಂದಿಸಿ, ಸಹಾಯ ಮಾಡುವ ಇವರ ಗುಣ ಮಹತ್ವದ್ದಾಗಿದೆ.
ಮಡದಿ ಭಾರತಿ ಮತ್ತು ಧನ್ವಿತ್ ಎನ್ನುವ ಒಬ್ಬ ಮಗನಿದ್ದು, ಚಿಕ್ಕದಾದ ಕುಟುಂಬವನ್ನು ಹೊಂದಿದ್ದಾರೆ. ದಿವಾಕರ್ ಸಾಲಿಯಾನ್ ಮತ್ತು ರತ್ನಾಕರ್ ಸಾಲಿಯಾನ್ ಎಂಬ ಇಬ್ಬರು ಸಹೋದರರು, ಶಶಿಕಲಾ ಎನ್ನುವ ಸಹೋದರಿಯಿದ್ದಾರೆ.
ತನ್ನ ಉದ್ಯೋಗದಂದಿಗೆ ಸಾಮಾಜಿಕ ಕಾಳಜಿಯ ಇವರ ಉದಾತ್ತ ಸೇವೆಗಳು ಹಲವಾರು ಕುಟುಂಬಗಳ ಪಾಲಿಗೆ ವರದಾನವಾಗಿದೆ. ಬರಲಿ ಸಂಪತ್ತು ಇವರಿಗೆ ಇನ್ನಷ್ಟು… ಮಾಡಲಿ ಸೇವೆ ಮತ್ತಷ್ಟು….. ಇದೇ ನಮ್ಮ ಆಶಯ.
(Copyrights owned by: billavaswarriors.com )