TOP STORIES:

ಪಟ್ಟಕ್ಕೆ ಪಟ್ಟದ ಹೆಸರೇ ಹೇಗೆ ಆಗಬೇಕೋ ಹಾಗೆಯೇ ಸಾಧನೆಗೆ ಸಾಧಕದ ಹೆಸರೇ ಆಗಬೇಕು ಇದೇ ಧಾರ್ಮಿಕ ನಡೆ…..


ಮಾತೆತ್ತಿದರೆ ಜೈ ಕೋಟಿ ಚೆನ್ನಯ ಅನ್ನುವ, ಕಂಡ ಕಂಡ ಬಸ್‌ಸ್ಟ್ಯಾಂಡ್- ಏರ್‌ಪೋರ್ಟ್ -ವೃತ್ತಗಳಿಗೆಲ್ಲ ಕೋಟಿಚೆನ್ನಯರ ಹೆಸರಿಡಬೇಕೆಂದು ಒತ್ತಾಯಿಸುವ ಕೋಟಿ ಚೆನ್ನಯರ ಅಭಿಮಾನಿಗಳಿಗೆ (ಭಕ್ತರಿಗಲ್ಲ), ಅವರ ಆದರ್ಶಪುರುಷರೇ ಸರಿಯಾದ ಉತ್ತರ ನೀಡಿದ್ದಾರೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತಿದ್ದರೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಈಗ ಸ್ವತಃ ಬ್ರಹ್ಮಬೈದರ್ಕಳೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬಹುಶಃ ಕೆಲವರಿಗೆ ಇನ್ನೂ ವಿಷಯವೇನೆಂದು ಹೊಳೆದಿರಲಿಕ್ಕಿಲ್ಲ. ತಮಗೆಲ್ಲಾ ತಿಳಿದಿರುವಂತೆ ಎಣ್ಮೂರ ಬೈದೆರುಗಳು ಅಥವಾ ಬ್ರಹ್ಮಬೈದರ್ಕಳು  ಬ್ರಹ್ಮರ ಅಥವಾ ಬೆಮ್ಮೆರ್‌ರ ಜೊತೆಗೆ ಅವರಿಗೆ ಸಮಾನವಾದ ಸ್ಥಾನ ಪಡೆದ ಈ ಮಣ್ಣಿನ ಅತ್ಯುನ್ನತ ಶಕ್ತಿಗಳು‌. ಅವರ ಆರಾಧನೆ ಬೈದೆರ್ಲು/ ಬೈದರ್ಕಳು ಎಂಬ ಹೆಸರಿಂದ ನಡೆಯುವುದೇ ಹೊರತು ಕೋಟಿ ಚೆನ್ನಯ ಎಂಬ ಅವರ ಲೌಕಿಕ ಹೆಸರಿನಿಂದಲ್ಲ. ಮೂಲ ಆರಾಧ್ಯ ಶಕ್ತಿಗಳನ್ನು ಬಿಡಿ, ಅವರ ದರ್ಶನ ಪಾತ್ರಿಗಳು/ ನೇಮ ಕಟ್ಟುವವರನ್ನೂ ಜನ ಹೆಸರಿಂದ ಕರೆಯದೆ ಎಡ-ಬಲ/ ದತ್ತ್- ಬಲತ್‌ಗ್ ಉಂತುನಾರ್/ ಕಟ್ಟುನಾರ್ ಎಂದೇ ಗುರುತಿಸುವುದು ವಾಡಿಕೆ‌. ಭಕ್ತರು ಯಾವತ್ತೂ ಅವರನ್ನು ಕೋಟಿ ಚೆನ್ನಯ ಎಂದು ಕರೆಯುವ ವಾಡಿಕೆ ಹಿಂದಿನಿಂದಲೂ ಇಲ್ಲ‌. ಆದರೆ ಈವಾಗ ಸ್ವಲ್ಪ ಸಮಯದಿಂದ, ಅದೂ ಮುಖ್ಯವಾಗಿ ಎಲ್ಲದರಲ್ಲೂ  ವರ್ಗ ಸಂಘರ್ಷವನ್ನು ಕಾಣಲು ಕಾತರಿಸುವ ತಥಾಕಥಿತ ಬುದ್ದಿಜೀವಿಗಳು, ಲೇಖಕರು ಮತ್ತು ಸಂಶೋಧಕರುಗಳ ಕೃಪೆಯಿಂದಾಗಿ, ಜನ ಹೋದಲ್ಲಿ ಬಂದಲ್ಲಿ ಕೋಟಿ ಚೆನ್ನಯ ಎಂದು ಕರೆಯುವುದು ಆರಂಭವಾಯಿತು. ಸಿಕ್ಕಸಿಕ್ಕ ಸಾರ್ವಜನಿಕ ಸ್ಥಳಗಳಿಗೆ ನಮ್ಮ ಆರಾಧ್ಯಶಕ್ತಿಗಳ, ಅದರಲ್ಲೂ ಅವರ ಲೌಕಿಕ ಹೆಸರನ್ನು ಇಡಬೇಕೆಂದು ಒತ್ತಾಯಿಸುವುದು, ವಾಟ್ಸಾಪ್/ ಫ಼ೇಸ್‌ಬುಕ್ ಕೂಟಗಳಲ್ಲಿ ಜೈ ಕೋಟಿ-ಚೆನ್ನಯ ಎಂದು ಕಮೆಂಟ್ ಮಾಡುವುದು ಇವೆಲ್ಲಾ ಆರಂಭವಾಯಿತು. ನಮಗಂತೂ ಇಂತಹವರಿಗೆ ತಿಳಿಹೇಳಿ ಸಾಕಾಗಿಹೋಗಿತ್ತು. ಅಷ್ಟರಲ್ಲಿ ಇಂತವರಿಗೆ ಸಾಕ್ಷಾತ್ ಬ್ರಹ್ಮ ಬೈದರ್ಕಳೇ ಈ ಬಗ್ಗೆ ಬುದ್ದಿ ಹೇಳಿದ ಘಟನೆ ಇತ್ತೀಚೆಗೆ ಗರೊಡಿಯೊಂದರಲ್ಲಿ ನಡೆಯಿತು.

ಇತ್ತೀಚೆಗೆ ಗರೊಡಿಯೊಂದರಲ್ಲಿ ಬೈದರ್ಕಳು ಮತ್ತು ಕೊಡಮಂದಾಯ ದೈವದ ದರ್ಶನ ಸೇವೆ ನಡೆಯುತ್ತಿತ್ತು. ಬೈದರ್ಕಳ ನುಡಿ ಆಗುತ್ತಿರುವ ಹೊತ್ತಿಗೆ ಗರೊಡಿಯ ಅಸ್ರಣ್ಣ/ ತಂತ್ರಿಯೂ ಆಗಿರುವ ಗ್ರಾಮದೇವರ ಅರ್ಚಕರು ಮಾತಿನ ನಡುವೆ ಬೈದರುಗಳನ್ನು ಕೋಟಿಬೈದ್ಯ ಚೆನ್ನಯ ಬೈದ್ಯ ಎಂದು ಸಂಬೋಧಿಸಿದರು. ಆಗ ಬೈದೆರುಗಳು ಸಮಾಧಾನ ಚಿತ್ತದಿಂದಲೇ ಅಸ್ರಣ್ಣರ ಮಾತಲ್ಲಿ ಆಗುತ್ತಿರುವ ತಪ್ಪನ್ನು ಎತ್ತಿ ತೋರಿಸಿದರು. ಕೊಡಮಂದಾಯ ದೈವದ ಜೊತೆಗೆ ದರ್ಶನದಲ್ಲಿದ್ದ ಬೈದರುಗಳು, “ಅಸ್ರಣ್ಣರೇ, ನಿಮ್ಮ ಮಾತಲ್ಲೊಂದು ಲೋಪವಿದೆ. ಇದನ್ನು ಇನ್ನು ಮುಂದಕ್ಕೆ ಸರಿಪಡಿಸಿಕೊಳ್ಳಿ. ನಾವು ಜನ್ಮಕ್ಕೆ ಬಂದಾಗ ನಮಗೆ ನಮ್ಮ ಬಲ್ಲಾಳರು ಇಟ್ಟ ಹೆಸರು ಕೋಟಿ -ಚೆನ್ನಯ ಎನ್ನುವುದರಲ್ಲಿ ಸಂದೇಹವಿಲ್ಲ‌. ಆದರೆ ಒಮ್ಮೆ ನಾವು ಕಾಯವನ್ನು ತ್ಯಜಿಸಿ ಬೆಮ್ಮೆರ್‌ರನ್ನು ಸೇರಿದ  ಬಳಿಕ ನಮ್ಮನ್ನು ಕೋಟಿ ಚೆನ್ನಯ ಎಂದು ಕರೆಯುವ ರೂಢಿ ಇಲ್ಲ. ಕಾಯದಲ್ಲಿ ಕೋಟಿ ಚೆನ್ನಯರಾಗಿದ್ದ ನಾವು ಮಾಯದಲ್ಲಿ ಬೆಮ್ಮೆರ್ ಬೈದೆರುಗಳಾಗಿ ನಂಬಿದವರನ್ನು ಕಾಯುತ್ತಾ ಬಂದಿದ್ದೇವೆ. ಅಲ್ಲದೆ ನಮ್ಮನ್ನು ಬೆಮ್ಮೆರ್ ಬೈದೆರುಗಳೆಂದು ಆರಾಧಿಸುವುದೇ ಹೊರತು ಕೋಟಿ-ಚೆನ್ನಯರೆಂದಲ್ಲ. ಹಾಗಾಗಿ ನೀವು ನಮ್ಮನ್ನು ಕೋಟಿ- ಚೆನ್ನಯ ಎಂದಾಗಲೀ ಕೋಟಿಬೈದ್ಯ- ಚೆನ್ನಯಬೈದ್ಯ ಎಂದಾಗಲೀ ಕರೆಯುವುದು ಸೂಕ್ತವಲ್ಲ. ಮುಂದಕ್ಕೆ ಈ ರೀತಿಯ ಮಾತು‌ ನಿಮ್ಮಿಂದ ಬಾರದಂತೆ ನೋಡಿಕೊಳ್ಳಿ” ಎಂದು ತಾಕೀತು ಮಾಡಿದರು.  ಅಸ್ರಣ್ಣರು ಮರುಮಾತಾಡದೆ ಬೈದರ್ಕಳ ನುಡಿಗೆ ತಲೆಬಾಗಿ ಅಂದಿನಿಂದ ಅವರನ್ನು ಬೆಮ್ಮೆರ್ ಬೈದೆರುಗಳೆಂದೇ ಕರೆಯತೊಡಗಿದ್ದಾರೆ. ಅಸ್ರಣ್ಣರೇ ಬೈದರ್ಕಳ ಮಾತಿಗೆ ತಲೆಬಾಗಿ ತಮ್ಮ ಹಿರಿತನವನ್ನು ಮೆರೆಯುತ್ತಿರುವಾಗ ನಮ್ಮನಿಮ್ಮಂತಹ ಸಾಮಾನ್ಯರಿಗೆ ಬೈದರ್ಕಳ ನುಡಿಯನ್ನು ಪಾಲಿಸುವುದು ಕಷ್ಟವಾದೀತೇ? ಬೈದರ್ಕಳ ನುಡಿಯನ್ನು ನಿಮಗೆ ತಲುಪಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಇನ್ನು ಮುಂದಕ್ಕಾದರೂ ಹೇಗೆ ನಡೆದುಕೊಳ್ಳುವಿರೋ ನಿಮಗೆ ಬಿಟ್ಟಿದ್ದು.


Related Posts

ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ


Share         ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ ಪೂಜಾರಿ ಮುದ್ರಾಡಿ ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ಲಭಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿ. ಈ ಕುರಿತು ಏಪ್ರಿಲ್ 2ರಂದು ಸರಕಾರದ


Read More »

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »